ಬೀದರ್: ವಿದ್ಯಾಭಾರತಿ ಕರ್ನಾಟಕ ಸಂಸ್ಥೆಯು ಡಿ. 20 ರಿಂದ 22 ರವರೆಗೆ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಿರುವ ಪ್ರಾಂತೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಬೀದರ್ ಜಿಲ್ಲೆಯಿಂದ 250 ಜನ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ರೇವಣಸಿದ್ಧಪ್ಪ ಜಲಾದೆ ತಿಳಿಸಿದರು.
ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಪ್ರಯುಕ್ತ ಸಮ್ಮೇಳನ ಏರ್ಪಡಿಸಲಾಗಿದೆ. ವಿದ್ಯಾಭಾರತಿ ಕರ್ನಾಟಕ ಸಂಸ್ಥೆಯ ಅಡಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ 50 ಶಾಲೆಗಳ ಮುಖ್ಯಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಸಮ್ಮೇಳನಕ್ಕೆ ತೆರಳಲಿದ್ದಾರೆ ಎಂದು ಹೇಳಿದರು.
ಡಿ. 20 ರಂದು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ವಿದ್ಯಾಭಾರತಿ ಕರ್ನಾಟಕ ಬೆಳೆದು ಬಂದ ದಾರಿ ಹಾಗೂ ನಾಡು, ನುಡಿ ಕುರಿತ ಪ್ರದರ್ಶನ ಆಯೋಜಿಸಲಾಗಿದೆ. ಡಿ. 21 ರಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಿ.22 ರಂದು ದೇಶದ ಆಂತರಿಕ, ಕಲಿಕೆಯಲ್ಲಿ ಮಾತೃಭಾಷೆ ಮಹತ್ವ ವಿಷಯ ಕುರಿತ ಉಪನ್ಯಾಸ ನಡೆಯಲಿದೆ ಎಂದರು. ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಸಹ ಕಾರ್ಯದರ್ಶಿ ಧನರಾಜ ರೆಡ್ಡಿ ಇದ್ದರು.