ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಳಕಲ್ಲನಲ್ಲಿ ಎಂಜಿನಿಯರಿಂಗ್‌ ಕಾಲೇಜು’

Last Updated 3 ಜನವರಿ 2014, 9:26 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ತಾಳಕೇರಿ, ಬಳೂಟಗಿ, ಕುದ್ರಿಮೋತಿ ಹಾಗೂ ಲಿಂಗನಬಂಡಿ ಗ್ರಾಮಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಜೂ­ರಾಗಿದ್ದು, ಕಟ್ಟಡಕ್ಕಾಗಿ ಈಗಾಗಲೇ ತಲಾ ₨8ಕೋಟಿ ಹಣ ಬಿಡುಗಡೆ­ಯಾಗಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು. 

ಸ್ಥಳೀಯ ತಾಲ್ಲೂಕು ಪಂಚಾಯಿತಿ­ಯಲ್ಲಿ ಈಚೆಗೆ ಮಾತನಾಡಿದ ಅವರು, ಯಡ್ಡೋಣಿ ಮತ್ತು ಮುಧೋಳ ಗ್ರಾಮಕ್ಕೆ ಐಟಿಐ ಕಾಲೇಜು ಮಂಜೂ­ರಾಗಿವೆ. ಹಾಗೆಯೇ ಯಲಬುರ್ಗಾದ ಮಹಿಳಾ ಐಟಿಐ ಕಾಲೇಜು ಕಟ್ಟಡಕ್ಕೆ ₨3ಕೋಟಿ ಮಂಜೂರಾಗಿದ್ದು, ನಿವೇಶನ ಇನ್ನೂ ಲಭ್ಯವಾಗುತ್ತಿಲ್ಲ ಎಂದರು.

₨43ಕೋಟಿ ವೆಚ್ಚದ ಎಂಜಿನಿ­ಯರಿಂಗ್‌ ಕಾಲೇಜು ತಳಕಲ್ಲ ಗ್ರಾಮ­ದಲ್ಲಿ ನಿರ್ಮಾಣಗೊಳ್ಳಲಿದ್ದು, ಕೇಂದ್ರ ಸರ್ಕಾರದ ‘ಮಾದರಿ ಶಾಲೆ’ಯು ಕೂಡಾ ಕುಕನೂರು ಗ್ರಾಮದಲ್ಲಿ ಪ್ರಾರಂ­ಭಿಸಲು ಪ್ರಸ್ತಾವನೆ ಸಲ್ಲಿಸ­ಲಾಗಿದೆ. ಇದು ಕೂಡಾ ಶೀಘ್ರದಲ್ಲಿ ಈಡೇರಲಿದೆ. ಮಂಗಳೂರು ಗ್ರಾಮದ ಐಟಿಐ ಕಾಲೇಜು ಕಟ್ಟಡಕ್ಕೆ ₨5ಕೋಟಿ ಹಣ ಲಭ್ಯವಿದ್ದು, ಕಟ್ಟಡಕ್ಕೆ ಜಮೀನು ಕೊಡುವವರು ಮುಂದೆ ಬರುತ್ತಿಲ್ಲ, ಕಳೆದ ಎರಡು ತಿಂಗಳ ಹಿಂದೆ ಗ್ರಾಮಕ್ಕೆ ಮಂಜೂರಾಗಿದ್ದ ಪದವಿ ಕಾಲೇಜು ಕಟ್ಟಡಕ್ಕೆ ಜಮೀನು ಲಭ್ಯವಾಗದೇ ಇರುವುದರಿಂದ ಅದನ್ನು ಕೂಡಾ ತಳಕಲ್ಲ ಗ್ರಾಮಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ರಸ್ತೆ: ಭಾನಾಪೂರ ಮತ್ತು ಬಂಡಿ ರಸ್ತೆ ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ ವಿವಿಧ ಹಂತದಲ್ಲಿ ಟೆಂಡರ್‌ ಕರೆಯಲಾಗಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾತಿ ದೊರೆತಿರುವುದರಿಂದ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ­ಗೊಳ್ಳಲಿದೆ, ಈಗಾಗಲೇ ಶೇ 50ರಷ್ಟು ಅನುದಾನ ಲಭ್ಯವಿದೆ.

ಗ್ರಾನೈಟ್‌ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಗಳು ಬಹುಬೇಗ ಹಾಳಾಗುತ್ತಿವೆ. ಅದಕ್ಕಾಗಿಯೇ ಗ್ರಾನೈಟ್ ಕಂಪೆನಿಗಳು ಸರ್ಕಾರಕ್ಕೆ ತುಂಬಿದ ಹಣವನ್ನು ಈ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲು ಕೋರಿದ್ದ­ರಿಂದ ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಹಣ ದೊರೆಯಲಿದೆ ಎಂದರು.

ರೈಲು ಯೋಜನೆ: ಗದಗ–ವಾಡಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಒಟ್ಟು ₨1,922ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ.  ರೈಲ್ವೆ ಬಜೆಟ್‌ನಲ್ಲಿ ಈ ಕಾಮಗಾರಿಯನ್ನು ಸೇರಿಸಲಾಗಿತ್ತು, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿಯೂ ಕೂಡಾ ಒಪ್ಪಿಗೆ ಸೂಚಿಸಿತ್ತು, ಆದರೆ ಯೋಜನಾ ಆಯೋ­ಗದ ಕೇಂದ್ರ ಆರ್ಥಿಕ ವಿಚಾರಣಾ ಸಂಸದೀಯ ಉಪ ಸಮಿತಿ­ಯಿಂದ ಮಂಜೂರಾತಿ ಸಿಕ್ಕಿರಲಿಲ್ಲ, ಡಿ.17ರಂದು ಒಪ್ಪಿಗೆ ಸಿಕ್ಕಿದ್ದರ ಹಿನ್ನೆಲೆಯಲ್ಲಿ ಕಾಮಗಾರಿಯ ಸರ್ವೆ ಕೆಲಸಕ್ಕೆ ತ್ವರಿತಗತಿಯಲ್ಲಿ ಚಾಲನೆ ದೊರೆಯಲಿದೆ.

ವಿದ್ಯುತ್‌ ಚಾಲಿತ ರೈಲು ಸೌಲಭ್ಯವಿರುವುದರಿಂದ ಈ ಯೋಜನೆ ಹೆಚ್ಚಿನ ಮಹತ್ವ ಪಡೆದು­ಕೊಂಡಿದೆ. 252 ಕಿ.ಮೀ. ಉದ್ದದ ಈ ಕಾಮಗಾರಿಯಲ್ಲಿ 31 ನಿಲ್ದಾಣ, 19 ಮೇಲ್ಸೇತುವೆ, 41 ಕೆಳ ಸೇತುವೆಗಳು ನಿರ್ಮಾಣಗೊಳ್ಳಲಿವೆ ಎಂದು ಸರ್ಕಾರ ನೀಡಿದ ವರದಿಯಲ್ಲಿ ದಾಖಲಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT