ಗುರುಮಠಕಲ್: ‘ಆನೆಕಾಲು ರೋಗ ಒಮ್ಮೆ ಬಂದರೆ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಮುಂಜಾಗೃತಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರೋಗದ ನಿಯಂತ್ರಣ ಸಾಧ್ಯ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ. ಕಂದಕೂರ ಹೇಳಿದರು.
ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಆನೆಕಾಲು ರೋಗ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
‘ಆನೆಕಾಲು ರೋಗ ಕ್ಯುಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತದೆ. ಈ ಸೊಳ್ಳೆ ಕಡಿದ ನಂತರ ಸುಮಾರು ಎಂಟು ವರ್ಷಗಳ ವರೆಗೆ ತನ್ನ ಪ್ರಭಾವವನ್ನು ತೋರದೇ ದೇಹದಲ್ಲಿ ಅಡಗಿಕೊಂಡಿರುತ್ತದೆ. ನಂತರ ದೇಹದಲ್ಲಿ ಚುಚ್ಚಿದ ಅನುಭವ, ಚಳಿ, ಜ್ವರ ಬರುವುದರ ಮೂಲಕ ಅದು ತನ್ನ ಜೀವಂತಿಕೆಯನ್ನು ಸೂಚಿಸುತ್ತದೆ.
ಇದು ರಾತ್ರಿ ವೇಳೆಯಲ್ಲಿ ಮತ್ತು ವ್ಯಕ್ತಿ ನಿದ್ದೆಯಲ್ಲಿರುವಾಗ ಹುಳು ಜಾಗೃತವಾಗುತ್ತದೆ. ದೇಹದಲ್ಲಿ ಅದು ಸಾವಿರಾರು ಮೊಟ್ಟೆಗಳನ್ನು ಇಡುವುದರ ಮೂಲಕ ಅದು ಕಾಲು ಬಾವು ಕಾಣಲು ಕಾರಣವಾಗುತ್ತದೆ ಎಂದರು.
ಒಮ್ಮೆ ಕಾಲು ಬಾವು ಬಂದರೆ ದೇಹದಲ್ಲಿರುವ ಹುಳುವನ್ನು ಜಾಗೃತ ಗೊಳ್ಳದಂತೆ ಮಾತ್ರೆಗಳಿಂದ ಮಾಡಬಹುದೇ ಹೊರತು ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಕಾರಣ ರೋಗದ ಇರುವಿಕೆಯನ್ನು ರಕ್ತ ಪರೀಕ್ಷೆಯ ಮೂಲಕ ತಿಳಿದು ಮತ್ತು ರೋಗ ಇಲ್ಲದವರು ಕೂಡ ಸರ್ಕಾರ ನೀಡುವ ಉಚಿತ ಡಿಇಸಿ ಮಾತ್ರೆಗಳನ್ನು ಸೇವಿಸುವುದರ ಮೂಲಕ ರೋಗವನ್ನು ನಿರ್ಮೂಲನೆ ಮಾಡಬೇಕು ಎಂದರು.
ಆರೋಗ್ಯ ಸಹಾಯಕ ಪರಮಾರೆಡ್ಡಿ, ವೈದ್ಯಾಧಿಕಾರಿ ಡಾ.ರವೀಂದ್ರ ಬನ್ನೆರ್ ಮಾತನಾಡಿದರು. ಪಟ್ಟಣದ ವಿವಿಧ ಬಡಾವಣೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರು. ಆರೋಗ್ಯ ಸಹಾಯಕ ಸಿದ್ರಾಮರೆಡ್ಡಿ ಇದ್ದರು.