ಪುತ್ತೂರು: ತುಳು ಭಾಷೆಯನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬ ಕುರಿತು ಜಾತಿ ಧರ್ಮವನ್ನು ಬದಿಗಿಟ್ಟು ತುಳುವರೆಲ್ಲರೂ ಒಂದಾಗಿ ಸೇರಿಕೊಂಡು ಚಿಂತನ-ಮಂಥನ ನಡೆಸಬೇಕಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಂನ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಗುರುದೇವದತ್ತ ಸಂಸ್ಥಾನಂನ ವಿಜಯ ರಜತ ಸಂಭ್ರಮದ ಹಿನ್ನಲೆಯಲ್ಲಿ ನಡೆಯುತ್ತಿರುವ `ತುಳುನಾಡ ಜಾತ್ರೆ’ ಗೆ ಪೂರ್ವಭಾವಿಯಾಗಿ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ಬುಧವಾರ ನಡೆದ `ತುಳುವೆರೆ ಬದ್ಕ್- ನೆಂಪುದ ಪಂತೊ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನ ದೇವರನ್ನು ಉಳಿಸಿಕೊಂಡಿದೆ. ಭಾಷೆ ಧರ್ಮ,ಬದುಕು ಧರ್ಮ, ನೀತಿ ಧರ್ಮ, ಸತ್ಯ ಧರ್ಮ ತುಳುನಾಡಿನಲ್ಲಿ ಪ್ರೀತಿ -ವಿಶ್ವಾಸದ ಸೆಲೆಯಾಗಿದೆ .ಪ್ರತಿಯೊಬ್ಬರ ಬದುಕಿನಲ್ಲಿ ನಿರಂತರ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಆಧ್ಯಾತ್ಮಿಕ ಮತ್ತು ಲೌಕಿಕ ಸ್ಪರ್ಧೆಗಳ ಪೈಕಿ ಆಧ್ಯಾತ್ಮಿಕ ಎಳೆತದಿಂದ ಬದುಕು ಪರಿಪೂರ್ಣಗೊಳ್ಳುತ್ತದೆ ಎಂದ ಸ್ವಾಮೀಜಿಯವರು ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದೇ ತುಳು ನಾಡ್ದ ಜಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.
ಸಾಹಿತಿ, ಉಪನ್ಯಾಸಕ ನರೇಂದ್ರ ರೈ ದೇರ್ಲ ಅವರು ಮಾತನಾಡಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಹಲವಾರು ಹೋರಾಟ ಒತ್ತಡಗಳು ನಡೆದರೂ ದೆಹಲಿಯಿಂದ ಒಳ್ಳೆಯ ಸುದ್ದಿ ಈ ತನಕ ಬಂದಿಲ್ಲ ಎಂದರು. ಹಿರಿಯರಾದ ಪಟೇಲ್ ನಾರಾಯಣ ರೈ ಅವರು ಉದ್ಘಾಟಿಸಿದರು. ಕೆದಂಬಾಡಿ ಕೆಯ್ಯೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ , ವಿಜಯ ರಜತ ಸಂಭ್ರಮ ಸಮಿತಿಯ ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ, ತುಳುತೇರ್ ಕೂಟದ ಪುತ್ತೂರು ತಾಲೂಕು ಸಂಚಾಲಕ ಕೆ. ಪದ್ಮನಾಭ ಶೆಟ್ಟಿ ಅವರು ಮಾತನಾಡಿದರು.
ಸನ್ಮಾನ: ಗ್ರಾಮದಲ್ಲಿ ಭೂತಾರಾಧನೆ ಸೇವೆ ಸಲ್ಲಿಸುತ್ತಿರುವ ಶೇಷಪ್ಪ ಮಡಿವಾಳ ಚೆನ್ನಾವರ ಅವರನ್ನು ಸನ್ಮಾನಿಲಾಯಿತು. ಅಂಕತ್ತಡ್ಕ ತುಳುತೇರು ಸ್ವಾಗತ ಸಮಿತಿಯ ಅಧ್ಯಕ್ಷ ರಾಮಕೃಷ್ಣ ರೈ ಕೋಡಂಬು, ಸಮಿತಿಯ ಗೌರವಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳೆಜ್ಜ ,ಕಾರ್ಯದರ್ಶಿ ದೀಕ್ಷಿತ್ ಜೈನ್ ಚೆನ್ನಾವರ, ಸಮಿತಿಯ ಖಜಾಂಜಿ ಕಿಟ್ಟಣ್ಣ ರೈ ನಡುಕೂಟೇಲು, ಕಡಮಜಲು ಸುಭಾಶ್ ರೈ, ಎ.ಕೆ.ಜಯರಾಮ ರೈ , ತ್ಯಾಂಪಣ್ಣ ರೈ ಅಂಕತ್ತಡ್ಕ , ಗುಡ್ಡಪ್ಪ ರೈ ಕೋರಿಕ್ಕಾರ್, ರಜಾಕ್ ಅಂಕತ್ತಡ್ಕ ,ಶೋಭಾ ರೈ ಗುರಿಕ್ಕಾನ ,ಸವಿತಾ ರೈ ಕಜೆ, ಸದಸ್ಯ ವಿಜೇತ್ ರೈ, ಚಂದ್ರಾವತಿ ರೈ ಪಾಲ್ತಾಡಿ ಮತ್ತಿತರರು ಇದ್ದರು.