ಔರಾದ್: ತೊಗರಿ ಬೆಂಬಲ ಬೆಲೆ ಖರೀದಿಗಾಗಿ ಸರ್ಕಾರ ತೊಗರಿ ಮಂಡಳಿಗೆ ನೀಡಿದ ₨ 20 ಕೋಟಿ ಸಾಲದು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ದೂರಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಚೆಗೆ ತೊಗರಿ ಖರೀದಿ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಕೆಲ ಭಾಗದಲ್ಲಿ ತೊಗರಿ ಇಳುವರಿ ತಡವಾಗಿ ಬರುತ್ತದೆ. ಅಲ್ಲಿಯವರೆಗೆ ತೊಗರಿ ಮಂಡಳಿಗೆ ನೀಡಿದ ಹಣ ಖರ್ಚಾದರೆ ಉಳಿದ ರೈತರಿಗೆ ಬೆಂಬಲ ಬೆಲೆ ಲಾಭ ಸಿಗುವುದಿಲ್ಲ. ಹೀಗಾಗಿ ಮಂಡಳಿಗೆ ₨100 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ರೈತರ ಹೋರಾಟದ ಫಲವಾಗಿ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₨ 700 ಬೆಂಬಲ ಹೆಚ್ಚಿಸಿದೆ. ಸದ್ಯ ಈಗ ಕ್ವಿಂಟಲ್ಗೆ ₨ 5000 ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಕ್ವಿಂಟಲ್ಗೆ ₨ 6,450 ಬೆಂಬಲ ಬೆಲೆ ನೀಡಬೇಕು. ಇದಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಖರೀದಿ ವೇಳೆ ತಾರತಮ್ಯ ಮಾಡದೆ ನಿಯಮಾನುಸಾರ ಖರೀದಿ ಮಾಡುವಂತೆ ಶಾಸಕ ಪ್ರಭು ಚವಾಣ್ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಪಿಎಂಸಿ ಅಧ್ಯಕ್ಷ ಬಾಪುರಾವ ಪಾಟೀಲ, ಉಪಾಧ್ಯಕ್ಷ ಗೋವಿಂದ ಇಂಗಳೆ, ಕಾರ್ಯದರ್ಶಿ ರವಿ ರಾಠೋಡ, ಬಸವರಾಜ ಪಾಟೀಲ ಕೊಳ್ಳೂರ, ರೈತ ಮುಖಂಡರು ಇದ್ದರು.