ಕೊಪ್ಪಳ:ಅಂಗಮಾರಿ ಬಾಧೆಯಿಂದ ಬೆಳೆ ಹಾಳಾಗಿ ಆರ್ಥಿಕ ಸಂಕಷ್ಟದಲ್ಲಿರುವ ದಾಳಿಂಬೆ ಬೆಳೆಗಾರರಿಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಶಿವರಾಮಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಮಾಡಿದ್ದಾರೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ನಿಯಮ 377 ರ ಅಡಿಯಲ್ಲಿ ಕೇಂದ್ರ ಸಚಿವರಿಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಿರುವ ಸಂಸದ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಪ್ರಮುಖ ಬೆಳೆಯಾಗಿದೆ. ಈ ಹಿಂದೆ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುವಂತಹ ಗುಣಮಟ್ಟ ಹೊಂದಿದ್ದ ದಾಳಿಂಬೆ ಬೆಳೆ ನೀರಿನ ಕೊರತೆ ಮತ್ತು ದುಂಡಾಣು ಅಂಗಮಾರಿ ರೋಗದಿಂದ ಸಂಪೂರ್ಣ ಹಾಳಾಗಿ ₨ 100 ಕೋಟಿ ಹಾನಿ ಸಂಭವಿಸಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾಹಿತಿಯ ಪ್ರಕಾರ ಸುಮಾರು 9 ಸಾವಿರ ರೈತರು ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಅಂದಾಜು ₨206 ಕೋಟಿಗಳಷ್ಟು ಸಾಲ ಮಾಡಿರುವುದಾಗಿ ತಿಳಿದುಬಂದಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದ ದಾಳಿಂಬೆಯನ್ನು ಸದ್ಯ ಕೆಲವೇ ರೈತರು ಮಾತ್ರ ದಾಳಿಂಬೆ ಬೆಳೆಯುತ್ತಿದ್ದು, ಬೆಳೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಅಲ್ಲದೇ ಬಹುತೇಕ ರೈತರು ಮತ್ತೆ ದಾಳಿಂಬೆ ಬೆಳೆ ಬೆಳೆಯುವ ಬಗ್ಗೆ ಆಶಾಭಾವನೆಯನ್ನೇ ಕಳೆದುಕೊಂಡಿದ್ದಾರೆ.
ಅಲ್ಲದೇ ಬೇರೆ ಬೆಳೆ ಬೆಳೆಯಬೇಕೆಂದರೆ, ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಬೇಕಾಗುತ್ತದೆ. ಹಾಗಾಗಿ ಸಂಕಷ್ಟದಲ್ಲಿರುವ ರೈತರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಸಂಸದ ಶಿವರಾಮಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ.