ಕೃಷ್ಣರಾಜಪೇಟೆ: ದೃಶ್ಯ ಮಾಧ್ಯಮಗಳು ಮತ್ತು ಅಂತರಜಾಲ ತಾಣಗಳು ಜನರಲ್ಲಿ ಮೂಢನಂಬಿಕೆಗಳನ್ನು ಪೋಷಿಸುತ್ತಿರುವುದು ಖಂಡನೀಯ ಎಂದು ಮೂಢನಂಬಿಕೆ ಪ್ರತಿಬಂಧಕ ಮಸೂದೆ ರಚನಾ ಸಮಿತಿಯ ಸದಸ್ಯ ಡಾ.ವಿ.ಎಸ್. ಶ್ರೀಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ 'ನಾವು- ನೀವು' ಸಮಾನ ಮನಸ್ಕರ ಚಿಂತನಾ ವೇದಿಕೆ ಈಚೆಗೆ ಆಯೋಜಿಸಿದ್ದ ತಿಂಗಳ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರ ಧಾರ್ಮಿಕ ಭಾವನೆಗಳಿಗೂ, ಮೂಢನಂಬಿಕೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ರಾಷ್ಟ್ರೀಯ ಕಾನೂನು ಶಾಲೆ ಮತ್ತು ರಾಜ್ಯದ ವಿಶ್ವ ವಿದ್ಯಾಲಯವೊಂದರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳ 200ಕ್ಕೂ ಹೆಚ್ಚು ಪರಿಣಿತರ ಅಭಿಪ್ರಾಯ ಪಡೆದ ನಂತರ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಮೂಢನಂಬಿಕೆ ನಿಷೇಧ ಕಾಯ್ದೆಯ ಕರಡು ತಯಾರಿಸಲಾಗಿದೆ. ಮೂಢ ನಂಬಿಕೆ ಆಚರಣೆಗಳ ಪ್ರತಿಬಂಧಕ ವಿದೇಯಕ ಕರಡು ಮಸೂದೆಯಿಂದ ಜನರ ನಂಬಿಕೆ, ಪೂಜಾ ಆಚರಣೆ, ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗಳಿಗೆ ಯಾವುದೇ ಧಕ್ಕೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್, ರೈತಸಂಘದ ಮುಖಂಡರಾದ ಎಲ್.ಬಿ. ಜಗದೀಶ್, ಎಂ.ವಿ. ರಾಜೇಗೌಡ, 'ನಾವು-ನೀವು' ವೇದಿಕೆಯ ಡಾ.ಉಮಾಶಂಕರ್, ಕೆ.ಎಂ. ವಾಸು, ಬಿ.ಸಿ.ಶಿವಮಲ್ಲು ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.