ಬೆಂಗಳೂರು: ‘ದೇವದಾಸಿ ಮಹಿಳೆಯರಿಗೆ ಉತ್ತಮ ಜೀವನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ₨ 1 ಸಾವಿರ ಮಾಸಾಶನ ನೀಡುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬಳ್ಳಾರಿ ಜಿಲ್ಲೆಯ ‘ಮುಕ್ತ’ ದೇವದಾಸಿ ಮಹಿಳೆಯರ ರಾಜ್ಯಮಟ್ಟದ ಒಕ್ಕೂಟದ ಕಾರ್ಯದರ್ಶಿ ರೇಣುಕಾ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ದೇವದಾಸಿ ಮಹಿಳೆಯರಿದ್ದಾರೆ. ಆದರೆ, ಸರ್ಕಾರದ ಯಾವುದೇ ಸೌಲಭ್ಯಗಳು ದೇವದಾಸಿ ಮಹಿಳೆಯರನ್ನು ತಲುಪುತ್ತಿಲ್ಲ ಎಂದು ದೂರಿದರು.
ಸದ್ಯ 45 ವರ್ಷಕ್ಕೂ ಹೆಚ್ಚಿನ ವಯೋಮಾನದ ದೇವದಾಸಿ ಮಹಿಳೆಯರಿಗೆ ₨400 ಮಾಸಾಶನ ನೀಡಲಾಗುತ್ತಿದೆ. ಈ ಅಲ್ಪ ಹಣದಿಂದ ಅವರ ಜೀವನ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಯಾವುದೇ ವಯೋಮಿತಿಯನ್ನು ನಿಗದಿಪಡಿಸದೆ ಎಲ್ಲ ವಯೋಮಾನದ ದೇವದಾಸಿ ಮಹಿಳೆಯರಿಗೂ ₨1 ಸಾವಿರ ಮಾಸಾಶನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ದೇವದಾಸಿಯರ ವಿವಾಹವನ್ನು ಪ್ರೋತ್ಸಾಹಿಸಲು ₨1 ಲಕ್ಷ ಪ್ರೋತ್ಸಾಹಧನ ಮೀಸಲಿಡಬೇಕು. ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕು. ದೇವದಾಸಿಯರು ಸ್ವಾವಲಂಬನೆಯಿಂದ ಜೀವನ ನಡೆಸಲು ಪ್ರತಿ ಕುಟುಂಬಕ್ಕೆ ಎರಡು ಎಕರೆ ಕೃಷಿ ಭೂಮಿ ನೀಡಬೇಕು ಎಂದು ಹೇಳಿದರು.
ಸರ್ಕಾರ ಕೂಡಲೇ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.