ಹೊಳಲ್ಕೆರೆ: ‘ನಾವು ದೇವರ ದರ್ಶನ ಪಡೆಯುವುದಕ್ಕಿಂತ ಜ್ಞಾನದ ದರ್ಶನ ಮಾಡುವುದು ಬಹುಮುಖ್ಯ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ಪ್ರಪಂಚದಲ್ಲಿ ಜ್ಞಾನ ಸಂಪಾದನೆ ಅನಿವಾರ್ಯ. ಹೆಚ್ಚು ಜ್ಞಾನ ಸಂಪಾದನೆ ಮಾಡಿ ಪರಿಪಕ್ವನಾಗುವುದರಿಂದ ಮಾತ್ರ ಸುಲಲಿತವಾಗಿ ಜೀವನ ನಡೆಸಬಹುದು. ದೇವರನ್ನು ಪೂಜಿಸುವುದರಿಂದ ಮುಕ್ತಿ ಸಿಗುವುದಿಲ್ಲ. ದೇವಾಲಯ ಕಟ್ಟುವುದಕ್ಕಿಂತ ಶಿಕ್ಷಣ ಪಡೆಯುವುದು ಮುಖ್ಯ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾತನಾಡಿ, ಸಮಾಜಕ್ಕೆ ಸಂತರ, ಶರಣರ ಮಾರ್ಗದರ್ಶನ ಅಗತ್ಯವಾಗಿದೆ. ಸುಶಿಕ್ಷಿತ ಸಮಾಜದ ನಿರ್ಮಾಣದಲ್ಲಿ ದಾರ್ಶನಿಕರ ಪಾತ್ರ ಬಹುದೊಡ್ಡದು. ಹಿಂದಿನಿಂದಲೂ ಮಠಗಳು ಶಿಕ್ಷಣ ನೀಡುವ ಮೂಲಕ ಸಮಾಜದ ಕತ್ತಲೆಯನ್ನು ತೊಡೆಯುತ್ತಿವೆ ಎಂದರು.
ಹೊಸದುರ್ಗ ಸದ್ಗುರು ಮಠದ ಕಾಂತಾನಂದ ಸ್ವಾಮೀಜಿ, ಪುರುಷೋತ್ತಮ ಸ್ವಾಮೀಜಿ, ರಾಮಾಜೋಯಿಸ್ ಗುರೂಜಿ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್, ಭಾರತೀ ಕಲ್ಲೇಶ್, ಪಾರ್ವತಮ್ಮ, ಎಸ್.ಜೆ.ರಂಗಸ್ವಾಮಿ, ರಾಘವೇಂದ್ರ ಪಾಟೀಲ ಹಾಜರಿದ್ದರು.