ನವದೆಹಲಿ: ಕೇಂದ್ರ ಸರ್ಕಾರ ’ನರ್ಮ್’ ಯೋಜನೆ ಯಡಿ ರಾಜ್ಯಕ್ಕೆ 2,104 ಬಸ್ಸುಗಳನ್ನು ಮಂಜೂರು ಮಾಡಿದೆ.
ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಸುಧೀರ್ ಕೃಷ್ಣ ನೇತೃತ್ವದ ಉನ್ನತಮಟ್ಟದ ಸಮಿತಿ ರಾಜ್ಯಕ್ಕೆ 2,104 ಬಸ್ಸುಗಳನ್ನು ಮಂಜೂರು ಮಾಡಿತು. ಕರ್ನಾಟಕ ಮುಂಚಿತವಾಗಿ ಪ್ರಸ್ತಾವನೆ ಕಳುಹಿಸಿತ್ತು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ನಗರ ಪ್ರದೇಶಗಳ ಸಾರಿಗೆ ವ್ಯವಸ್ಥೆ ಉತ್ತಮ ಪಡಿಸುವ ಉದ್ದೇಶದಿಂದ ರೂಪಿಸಲಾದ ನರ್ಮ್ ಯೋಜನೆಯಡಿ ಈ ಸಲ ಡಿಪೋ, ವರ್ಕ್ಶಾಪ್ ಮತ್ತು ನಿಯಂತ್ರಣ ಕೇಂದ್ರಗಳ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವ ಉದ್ದೇಶವಿದೆ.
ಪ್ರಧಾನಿ ಮನಮೋಹನ್ಸಿಂಗ್ ನೇತೃತ್ವದ ಆರ್ಥಿಕ ವ್ಯವಹಾರಗಳ ಸಮಿತಿ ಈಚೆಗೆ ‘ಮುಂಚೂಣಿ ಕಾರ್ಯಕ್ರಮ’ದಡಿ ವಿವಿಧ ರಾಜ್ಯಗಳಿಗೆ ಹತ್ತು ಸಾವಿರ ಬಸ್ಸುಗಳನ್ನು ಪೂರೈಸುವ ನಿರ್ಧಾರ ಮಾಡಿತ್ತು.
ಸಾರಿಗೆ ವ್ಯವಸ್ಥೆಯಲ್ಲಿ ದಕ್ಷತೆ ತರಲು ಪ್ರಯತ್ನ ಮಾಡಿರುವ ಕರ್ನಾಟಕದ ಕ್ರಮವನ್ನು ಕೇಂದ್ರ ಸರ್ಕಾರ ಮೆಚ್ಚಿದೆ. ಈ ಮಾದರಿ ಅಳವಡಿಸಿ ಕೊಳ್ಳುವಂತೆ ಉಳಿದ ರಾಜ್ಯಗಳಿಗೂ ಸೂಚಿಸಿದೆ.