ಮಂಗಳೂರು: ‘ಕುಳಾಯಿ ಹಾಗೂ ಹೆಜಮಾಡಿಯ ಮೀನುಗಾರಿಕಾ ಬಂದರುಗಳಿಗೆ ನವೆಂಬರ್ ತಿಂಗಳಲ್ಲಿ ಶಂಕುಸ್ಥಾಪನೆ ನಡೆಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಳಾಯಿ ಮತ್ತು ಹೆಜಮಾಡಿಯ ಮೀನುಗಾರಿಕಾ ಬಂದರು ನಿರ್ಮಾಣದ ಬಗ್ಗೆ ನವಮಂಗಳೂರು ಬಂದರು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚೀನಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಮರಳಿದ ಬಳಿಕ ಅವರ ಜತೆ ಸಮಾಲೋಚನೆ ನಡೆಸಿ ಶಂಕುಸ್ಥಾಪನೆಗೆ ದಿನ ನಿಗದಿ ಮಾಡಲಾಗುವುದು’ ಎಂದರು.
‘ಮೂಡುಬಿದಿರೆಯಲ್ಲಿ ಕ್ರೀಡಾ ಇಲಾಖೆ ಅಧೀನದಲ್ಲಿ 32 ಎಕರೆ ಜಾಗವಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿರುವ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವುದು ಮೂಡುಬಿದಿರೆ-ಯಲ್ಲಿ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 850ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಮೋಹನ ಆಳ್ವ ಅವರು ದತ್ತು ಪಡೆದು, ಅವರ ಶಿಕ್ಷಣ ಹಾಗೂ ಕ್ರೀಡಾ ಸಾಧನೆಗೆ ನೆರವಾಗುತ್ತಿದ್ದಾರೆ. ಅಲ್ಲಿನ ಸ್ವರಾಜ್ಯ ಮೈದಾನದಲ್ಲಿ ₨ 4 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ಟ್ರ್ಯಾಕ್ ನಿರ್ಮಿಸುವ ಯೋಜನೆ ಇದೆ’ ಎಂದರು.
‘ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಜಾಗದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಯೋಜನೆ ಸದ್ಯಕ್ಕಿಲ್ಲ. ಇಲಾಖೆಗೆ ಬಜೆಟ್ನಲ್ಲಿ ಕೇವಲ 100 ಕೋಟಿ ಅನುದಾನ ಮಾತ್ರ ಮೀಸಲಿಡಲಾಗಿದೆ. ಇದರಲ್ಲಿ ಅಧಿಕಾರಿಗಳ ಸಂಬಳ ಹಾಗೂ ನಿರ್ವಹಣಾ ವೆಚ್ಚ ತೆಗೆದರೆ ಕೇವಲ ₨ 34 ಕೋಟಿ ಮಾತ್ರ ಕ್ರೀಡಾ ಅಭಿವೃದ್ಧಿಗೆ ಲಭ್ಯ. ಮುಂದಿನ ವರ್ಷದಿಂದ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದರು.