ತುಮಕೂರು: ‘ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳಲು ನಾವು ಅವರ ಕೂಲಿ ಕಾರ್ಮಿಕರಲ್ಲ’ ಎಂದು ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಇಲ್ಲಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಕೋರ್ ಕಮಿಟಿ ಅಂತಿಮಗೊಳಿಸಿದ ಅಭ್ಯರ್ಥಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು. ಪಕ್ಷ ಕಟ್ಟುತ್ತಿರುವರು ನಾವು; ನಮ್ಮ ತೀರ್ಮಾನಕ್ಕೆ ಅವರು ಅಂತಿಮ ಮುದ್ರೆ ಒತ್ತಬೇಕಷ್ಟೆ’ ಎಂದರು.
‘ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಹೈಕಮಾಂಡ್ ಟಿಕೆಟ್ ನೀಡದು. ಕೆಜೆಪಿ–ಬಿಜೆಪಿ ಹೊಂದಾಣಿಕೆ ಮಾಡಿಕೊಂಡರೂ ಇಲ್ಲಿ ಕೆಜೆಪಿಗೆ ಸೀಟು ಬಿಟ್ಟುಕೊಡಲು ನಾವು ತಯಾರಿಲ್ಲ. ಯಡಿಯೂರಪ್ಪ ಪಕ್ಷಕ್ಕೆ ಬಂದರೂ ಅವರ ಬೆಂಬಲಿಗ ಬಸವರಾಜ್ಗೆ ಟಿಕೆಟ್ ಇಲ್ಲ. ಈಗಾಗಲೇ ಕೋರ್ ಕಮಿಟಿ ನೀಡಿರುವ ಪಟ್ಟಿಯಲ್ಲಿನ ಒಬ್ಬರಿಗೆ ಟಿಕೆಟ್ ಕೊಡಬೇಕು. ನಮ್ಮ ಮಾತಿಗೆ ಅನುಮೋದನೆ ನೀಡುವ ಕೆಲಸ ಮಾತ್ರ ಹೈಕಮಾಂಡ್ಗೆ ಸೇರಿದ್ದು. ಅದರಾಚೆಗೆ ಹೈಕಮಾಂಡ್ ಏನನ್ನು ತೀರ್ಮಾನಿಸುವಂತಿಲ್ಲ’ ಎಂದರು.