ಯಲಹಂಕ: ‘ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಜ್ವಲಂತ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಲಭ್ಯವಿರುವ ನೀರಿನ ಮೂಲಗಳನ್ನು ಸಮರ್ಪಕವಾಗಿ ಪುನರ್ ಬಳಕೆ ಮಾಡಿಕೊಂಡರೆ ಈ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗಲಿದೆ’ ಎಂದು ಜಲತಜ್ಞ ಅಯ್ಯಪ್ಪ ಮಸಗಿ ನುಡಿದರು.
ಹುಣಸಮಾರನಹಳ್ಳಿ ಗ್ರಾಮದಲ್ಲಿ ಅಕ್ಷಯ ಕ್ರೆಡಿಟ್ ಸೌಹಾರ್ದ ಸಂಘ ಆಯೋಜಿಸಿದ್ದ ಸೌಹಾರ್ದ ಸಹಕಾರಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಅಂತರ್ಜಲದ ಸಮಸ್ಯೆ ಬಗೆಹರಿಸಲು ಈಚಿನ ದಿನಗಳಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದು, ಇದಕ್ಕೆ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಕೈಜೋಡಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಮಸಗಿ, ವಾಣಿಜ್ಯ ಅಧಿಕಾರಿ ಎನ್.ಜಿ.ರಂಗಸ್ವಾಮಿ, ಪ್ರಗತಿಪರ ರೈತ ಬಿ.ತಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ.ಆರ್.ಬೈರೇಗೌಡ, ಉಪಾಧ್ಯಕ್ಷ ವೀರೇಶ್, ಗೌರವ ಕಾರ್ಯದರ್ಶಿ ಬಿ.ಪುಟ್ಟ ಶಾಮಪ್ಪ, ಕಾರ್ಯನಿರ್ವಹಣಾಧಿಕಾರಿ ಡಿ.ಎಸ್. ವೆಂಕಟಾಚಲಪತಿ ಉಪಸ್ಥಿತರಿದ್ದರು.