ಬೀದರ್: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿದ ಸಾರ್ವಜನಿಕರು, ನಗರಸಭೆ ವತಿಯಿಂದ ಆರಂಭಿಸಲಾದ ಶ್ರಮದಾನ ಕಾರ್ಯಕ್ಕೆ ತಕರಾರು ತೆಗೆದ ಪ್ರಸಂಗ ನಗರದ ವಾರ್ಡ್ ಸಂಖ್ಯೆ 1 ರ ವ್ಯಾಪ್ತಿಯ ಶಹಾಗಂಜ್ನಲ್ಲಿ ಶುಕ್ರವಾರ ನಡೆಯಿತು.
ಪೌರಾಯುಕ್ತರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರಮದಾನಕ್ಕಾಗಿ ನಗರಸಭೆ ಸಿಬ್ಬಂದಿ ಜತೆಗೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು, ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೊದಲು ಅದನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ, ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಆರು ದಿನಗಳಿಂದ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಮೊದಲು ನೀರಿನ ಸಮಸ್ಯೆ ಪರಿಹರಿಸಿ, ನಂತರ ಶ್ರಮದಾನ ಮಾಡಿ ಎಂದರು.
ನಾಗರಿಕರು ತಕರಾರು ತೆಗೆದ ಬಳಿಕ ಪೌರಾಯುಕ್ತರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಒತ್ತಾಯಿಸಿದರು.
‘ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು ನೀವೇ ಹೇಳಿ’ ಎಂದು ನಗರಸಭೆ ಸದಸ್ಯ ಮನ್ಸೂರ್ ಖಾದ್ರಿ ಪೌರಾಯುಕ್ತರನ್ನು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಜಿಲ್ಲಾ ಪಂಚಾಯಿತಿ ಸಿಇಒ ಮುಖ್ಯ ಉಜ್ವಲ್ಕುಮಾರ್ ಘೋಷ್ ಎದುರಿಗೆ ತರಾಟೆಗೆ ತೆಗೆದುಕೊಂಡರು.
ನೀರಿನ ಸಮಸ್ಯೆ ಬಗೆಹರಿಸಲು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲು ಸೌಕರ್ಯ ಕಲ್ಪಿಸಿ: ಬೀದರ್ ಉತ್ಸವ ಮಾಡಿ. ಆದರೆ ಅದಕ್ಕೂ ಮುಂಚೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಿ. ಸ್ವಚ್ಛತೆ ಇಲ್ಲದಿದ್ದರೂ ಇರಬಹುದು. ಆದರೆ, ನೀರಿಲ್ಲದೆ ಇರಲು ಆಗದು ಎಂದು ಬಳಿಕ ‘ ಮನ್ಸೂರ್ ಅಹಮ್ಮದ್ ಖಾದ್ರಿ ಒತ್ತಾಯಿಸಿದರು.
ನಗರದ ಹಳೆಯ ಭಾಗದ ರಸ್ತೆಗಳ ಸ್ಥಿತಿ ದಯನೀಯವಾಗಿದೆ. ಪಾದಚಾರಿಗಳ ಸಂಚಾರಕ್ಕೂ ಯೋಗ್ಯವಾಗಿಲ್ಲ. ಆದರೂ, ರಸ್ತೆಗಳನ್ನು ನಿರ್ಮಿಸುತ್ತಿಲ್ಲ. ಈಗ ಬೀದರ್ ಉತ್ಸವ ಮಾಡಿ ಇಂಥ ರಸ್ತೆಗಳನ್ನು ಹೊರಗಿನವರಿಗೆ ತೋರಿಸಬೇಕೇ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.