ತರೀಕೆರೆ: ಬೆಲೆ ಏರಿಗೆ, ಭಯೋತ್ಪಾದನೆ ನಿಗ್ರಹ ಹಾಗೂ ಸಾಮರಸ್ಯದ ಮೂಲಕ ನೆಮ್ಮದಿಯ ಬದುಕಿನ ಜೊತೆಜೊತೆಯಲ್ಲಿ ರಾಷ್ಟ್ರದ ಪ್ರಗತಿಗಾಗಿ ಬಿಜೆಪಿಗೆ ಮತ ನೀಡುವಂತೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕರೆ ನೀಡಿದರು.
ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಇಲ್ಲದೇ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ನ ದುರಾಡಳಿತ ಮತ್ತು ಬ್ರಷ್ಟಾಚಾರದಿಂದ ದೇಶ ತತ್ತರಿಸಿಹೋಗಿದೆ.
ಭಯೋತ್ಪಾದನೆಯ ಕರಿ ನೆರಳು ಉತ್ತರ ಭಾರತ ರಾಜ್ಯಗಳನ್ನು ದಾಟಿ ಶಾಂತಿಯುತವಾದ ದಕ್ಷಿಣದ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿರುವುದು ಮಾತ್ರವಲ್ಲದೇ ಮಲೆನಾಡಿನ ಗ್ರಾಮೀಣ ಭಾಗಗಕ್ಕೂ ತನ್ನ ಕದಂಭ ಬಾಹುಗಳನ್ನು ಚಾಚುತ್ತಿದೆ. ಇದಕ್ಕೆ ಇತ್ತೀಚೆಗೆ ಕೊಪ್ಪದಲ್ಲಿ ದೊರೆತ ಬಾಂಬ್ ತಯಾರಿಕ ವಸ್ತುಗಳೇ ಸಾಕ್ಷಿ. ಕಾಂಗ್ರೆಸ್ ಭಯೋತ್ಪಾದನೆಯನ್ನು ತಡೆಹಿಡಿಯುತ್ತಿದೆಯೋ ಇಲ್ಲ ಪ್ರೋತ್ಸಾಹಿಸುತ್ತಿದೆಯೋ ಎಂಬ ಅನುಮಾನಗಳು ಕಾಡತೊಡಗಿದೆ. ಯುವಕ ಯುವತಿಯರು ಉದ್ಯೋಗ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ನಕ್ಸಲಿಸಂಗೆ ಮಾರುಹೋಗುತ್ತಿದ್ದಾರೆ ಎಂದರು.
ದೇಶದ ಆರ್ಥಿಕತೆಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತಹ ಹಲವು ಬ್ರಷ್ಟಾಚಾರ ಪ್ರಕರಣಗಳು ಯುಪಿಎ ನೇತೃತ್ವದ ಸರ್ಕಾರದಿಂದ ನಡೆದು ಲಕ್ಷಾಂತರ ಕೋಟಿ ರೂಗಳನ್ನುಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತಕ್ಕೆ ಬಂದ ಒಂದು ವರ್ಷದಲ್ಲಿಯೇ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ವಾಪಾಸ್ ತರಲು ನಿರ್ಧರಿಸಲಾಗಿದೆ. ದೇಶಕ್ಕೆ ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಹಲವು ಸಮಸ್ಯೆಗಳಿಗೆ ಜನತೆ ಬೆಲೆ ತೆತ್ತಬೇಕಾಗಿ ಬಂದಿದ್ದು ದುರ್ದೈವ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ತರಲು ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಮಲೆನಾಡು, ಬಯಲುಸೀಮೆ, ಕರಾವಳಿ ಪ್ರದೇಶ ಒಳಗೊಂಡು ಉಡುಪಿ–ಚಿಕ್ಕಮಗಳೂರು ಕ್ಷೇತ್ರ ವೈಶಿಷ್ಟ್ಯತೆಯಿಂದ ಕೂಡಿದ್ದು ಸಮಸ್ಯೆಗಳ ಮಹಾಪೂರವೇ ಇದೆ. ಇವುಗಳನ್ನು ನಿವಾರಿಸಲು ಇಚ್ಚಾ ಶಕ್ತಿ ಅಗತ್ಯವಿದ್ದು, ಹಿಂದಿನ ಸಂಸದರ ಇಚ್ಚಾ ಶಕ್ತಿ ಕೊರತೆಯಿಂದಾಗಿ ಸಮಸ್ಯೆ ಹಾಗೇಯೇ ಉಳಿದಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಿಂದೆ ಇಂಧನ ಸಚಿವರಾಗಿ ನಿರ್ವಹಿಸಿದ ಕಾರ್ಯ ಎಲ್ಲರಿಗೂ ತಿಳಿದಿದೆ. ಈ ಕ್ಷೇತ್ರದ ಸಂಸದರಾಗಿ ಆಯ್ಕೆ ಮಾಡುವ ಮೂಲಕ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಡಲು ಅವರಿಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.
ದೇಶದ ಕುರಿತಂತೆ ಮಾತನಾಡಿದರೆ ಕೋಮುವಾದಿ ಹಣೆಪಟ್ಟಿ ಕಟ್ಟುವ ಜಾತಿ–ಜಾತಿಗಳ ನಡುವೆ ಧರ್ಮ–ಧರ್ಮಗಳ ನಡುವೆ ವೈಶಮ್ಯ ಹುಟ್ಟಿಹಾಕಿ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಜನತೆ ತಿರಸ್ಕರಿಸಲಿದ್ದು ಬಿಜೆಪಿ ನೇತೃತ್ವದ ಸರ್ಕಾರ ರಚನೆಗೊಂಡು ಮೋದಿ ಈ ರಾಷ್ಟ್ರದ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಬಿಜೆಪಿ ಮುಖಂಡರಾದ ಗೋಪಿಕೃಷ್ಣ, ಟಿ.ಎಲ್.ರಮೇಶ್, ಟಿ.ಎಂ. ಬೋಜರಾಜ್, ಕರಕುಚ್ಚಿ ಮೋಹನ್, ಸದಾನಂದ, ವಿಜಯ್, ಶಿವಮೂರ್ತಿ ಇನ್ನಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.