ಕಾರವಾರ: ‘ಸೀಬರ್ಡ್ ನೌಕಾನೆಲೆ ಯೋಜನೆ ಪೂರ್ಣಗೊಂಡರೆ ದಕ್ಷಿಣ ಭಾರತ ಇನ್ನಷ್ಟು ಸುರಕ್ಷಿತವಾಗಲಿದ್ದು, ಇಲ್ಲಿನ ಸುತ್ತಲಿನ ಪ್ರದೇಶ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಲಿದೆ’ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ಅರ್ಗಾದ ಕದಂಬ ನೌಕಾನೆಲೆಯಲ್ಲಿ ನೌಕಾ ಸಪ್ತಾಹದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
‘ಸೀಬರ್ಡ್ ನೌಕಾನೆಲೆ’ ಯೋಜನೆ ರಾಷ್ಟ್ರೀಯ ಯೋಜನೆ ಯಾಗಿದ್ದು, ಇದಕ್ಕಾಗಿ ಜನರು ತ್ಯಾಗ ಮಾಡಲೇ ಬೇಕು. ಇದು ದೇಶದ ರಕ್ಷಣೆ ಪ್ರಶ್ನೆ ಹೀಗಾಗಿ ಎಲ್ಲರೂ ಇದಕ್ಕೆ ಸಹಕರಿಸಬೇಕು’ ಎಂದರು.
‘ನಿರಾಶ್ರಿತರಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ, ಇದರ ಜೊತೆಗೆ ದೇಶದ ಕರಾವಳಿಯ ಭದ್ರತೆಯನ್ನೂ ನೋಡಿಕೊಳ್ಳಬೇಕಾಗುತ್ತದೆ. ದೇಶದ ರಕ್ಷಣೆಯ ಬಗ್ಗೆಯೂ ಪ್ರಜೆಗಳು ಎಚ್ಚರ ವಹಿಸಬೇಕು’ ಎಂದು ನಿರಾಶ್ರಿತರ ಪರಿಹಾರದ ಕುರಿತ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಜ್ಯಪಾಲರು ಖಾರವಾಗಿ ಉತ್ತರಿಸಿದರು.
ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಸಿ.ಎಸ್. ಮೂರ್ತಿ ಇದ್ದರು.