ಭಾಲ್ಕಿ: ರಾಷ್ಟ್ರದ ಏಕತೆಗೆ ಹೋರಾಟ ಮಾಡಿದ ಸರ್ದಾರ್ ವಲ್ಲಭಭಾಯಿ ಪಟೇಲರ ಆದರ್ಶ ಎಲ್ಲರಿಗೂ ಮಾದರಿಯಾಗಬೇಕು. ಎಲ್ಲೆಡೆ ರಾಷ್ಟ್ರಭಕ್ತಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿಯ ಸರ್ದಾರ್ ಪಟೇಲರ ವೃತ್ತದಲ್ಲಿ ಭಾನುವಾರ ನಡೆದ ವಲ್ಲಭಭಾಯಿ ಪಟೇಲರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುತ್ಥಳಿಯ ಅಡಿಪಾಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಯುವಕರು ತತ್ವಸಿದ್ಧಾಂತಗಳಿಗೆ ಬದ್ಧತೆ ಇಟ್ಟು ಶ್ರಮಿಸಬೇಕು ಎಂದರು.
ಲಾಡಗೇರಿಯ ಗಂಗಾಧರ ಸ್ವಾಮೀಜಿ, ಶಿವಣಿಯ ಹಾವಗಿಲಿಂಗ ಸ್ವಾಮೀಜಿ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಶಿವಯ್ಯ ಸ್ವಾಮಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸೂರಜ್ಸಿಂಗ್ ಠಾಕೂರ, ಚಂದ್ರಕಾಂತ ಬಿರಾದಾರ ಮಾತನಾಡಿದರು.
ಸರ್ದಾರ ಪಟೇಲ್ ಅಧ್ಯಯನ ಕೇಂದ್ರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರದ ಸಂಚಾಲಕ ಓಂಪ್ರಕಾಶ ರೊಟ್ಟೆ ಸ್ವಾಗತಿಸಿದರು. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಶಿವಪುತ್ರ ಧಾಬಶೆಟ್ಟಿ ವಂದಿಸಿದರು.