ಬೆಂಗಳೂರು: ‘ಪತ್ರಿಕೆಗಳು ಮತ್ತು ಸಮಾಜಕ್ಕೆ ಅವಿನಾಭಾವ ಸಂಬಂ ಧವಿದೆ. ಪತ್ರಿಕೆಗಳು ಸಮಾಜಮುಖಿ ಕೆಲಸ ಮಾಡ ಬೇಕು’ ಎಂದು ಹಿರಿಯ ಪತ್ರಕರ್ತ ಪಿ. ರಾಮಯ್ಯ ಹೇಳಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕವಿಪವಿ (ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಕಳೆಯ ವಿದ್ಯಾರ್ಥಿಗಳ ಸಂಘ) ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಕರ್ತರು ಸವಾಲುಗಳಿಗೆ ಎದೆಗುಂದದೆ ಮುನ್ನಡೆಯಬೇಕು’ ಎಂದರು.
ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ ಉಪಸಂಪಾದಕಿ ಸುಶೀಲಾ ಡೋಣೂರ ಅವರ ‘ನ್ಯಾನ್ಸಿ’ ಹಾಗೂ ಸುರೇಶ್ ಹಿರೇಮಠ ಅವರ ಪತ್ರಿಕಾ ಸ್ವಾತಂತ್ರ್ಯ ಮತ್ತು ಕಾನೂನುಗಳು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಪುಸ್ತಕ ಬಿಡುಗಡೆ ಮಾಡಿದ ಬೆಂಗಳೂರು ವಿಶ್ವವಿದ್ಯಾಲ ಯದ ಸಂವಹನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಎಚ್.ಎಸ್. ಈಶ್ವರ್ ಮಾತನಾಡಿ, ‘ನ್ಯಾನ್ಸಿ ಮಾಡೆಲಿಂಗ್ ಪ್ರಪಂಚದ ಅಪರೂಪದ ಕಾದಂಬರಿ. ಸಮಾಜ ಮತ್ತು ವ್ಯಕ್ತಿಗಳ ನಡುವಿನ ಸಂಘರ್ಷವನ್ನು ಒಬ್ಬ ಸಮಾಜ ವಿಜ್ಞಾನಿ ಹಾಗೂ ಮನೋ ವಿಜ್ಞಾನಿ ಯಂತೆ ಗುರುತಿಸುವಲ್ಲಿ ಸುಶೀಲಾ ಯಶಸ್ವಿಯಾಗಿದ್ದಾರೆ’ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ 31 ವರ್ಷ ಸೇವೆ ಸಲ್ಲಿಸಿ, ಮುಂದಿನ ಫೆಬ್ರವ ರಿಯಲ್ಲಿ ನಿವೃತ್ತರಾಗಲಿರುವ ಡಾ. ಎ.ಎಸ್. ಬಾಲ ಸುಬ್ರಹ್ಮಣ್ಯ ಅವರನ್ನು ಗೌರವಿಸಲಾಯಿತು.
ಬಾಲಸುಬ್ರಹ್ಮಣ್ಯ ಮಾತನಾಡಿ, ‘ಯಾವಾಗಲೂ ಕಲಿಕೆಯಲ್ಲಿ ತೊಡಗಿದವನು ಮಾತ್ರ ಒಳ್ಳೆಯ ಶಿಕ್ಷಕನಾಗಲು ಸಾಧ್ಯ. ವಿದ್ಯಾರ್ಥಿಗಳಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಪ್ರಾಮಾಣಿಕ ಶಿಕ್ಷಕನ ಗುಣ’ ಎಂದರು.
ಸಂವಹನ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಸಂತ ನಾಡಿಗೇರ, ಮಹೇಶ ಕುಲಕರ್ಣಿ, ಮೈಲಾ ರಲಿಂಗ ದಿಂಡಲಕೊಪ್ಪ, ಗವಿಸಿದ್ದ ಹೊಸಮನಿ, ರಾಮು ಪಾಟೀಲ್, ಡಾ. ವೀರೇಶ್ ಹಿರೇಮಠ ಮೊದಲಾದವರನ್ನು ಸನ್ಮಾನಿಸಲಾಯಿತು.