ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿವರ್ತನೆ-–ನಾರಾಯಣಗುರು ಪ್ರೇರಕ ಶಕ್ತಿ’

ಮೂಲ್ಕಿಯಲ್ಲಿ ತುಳುಚಿತ್ರಕ್ಕೆ ಚಾಲನೆ
Last Updated 16 ಡಿಸೆಂಬರ್ 2013, 6:25 IST
ಅಕ್ಷರ ಗಾತ್ರ

ಮೂಲ್ಕಿ: ಆಧ್ಯಾತ್ಮಿಕ ಚಿಂತನೆಯಿಂದ ನೂರು ವರ್ಷದ ಹಿಂದೆಯೇ ಕ್ರಾಂತಿಯನ್ನು ಮಾಡಿದ ನಾರಾಯಣಗುರುಗಳ ಸಂದೇಶ ಇಂದು ಕತ್ತಲ­ಲ್ಲಿರುವ ದೇಶಕ್ಕೆ ಅಗತ್ಯವಾಗಿ ಬೆಳಕಾಗಬೇಕಾಗಿದೆ. ಸಾಮಾಜಿಕ ಪರಿವರ್ತನೆಗೆ ನಾರಾಯಣಗುರು­ಗಳು ಪ್ರೇರಕ ಶಕ್ತಿ ಆಗಿರುವುದರಿಂದ ವ್ಯಾಪಾರೀ­ಕರಣವಾಗಿರುವ ಇಂದಿನ ಚಿತ್ರರಂಗದಲ್ಲಿ ಕಲಾತ್ಮ­ಕತೆಯ ಚಿತ್ರವಾಗಿ ಬ್ರಹ್ಮಶ್ರೀ ನಾರಾಯಣಗುರು ತುಳು ಸಿನಿಮಾ ವಿಭಿನ್ನವಾಗಿ ಬೆಳೆಗಬೇಕು. ಈ ಚಿತ್ರದಿಂದ ರಾಷ್ಟ್ರಮಟ್ಟದಲ್ಲಿ ಗುರುಗಳ ತತ್ವಾ­ದರ್ಶವನ್ನು ಪಸರಿಸಲಿ ಎಂದು ಸಂಸದ ನಳಿನ್‌­ಕುಮಾರ್ ಕಟೀಲು ಹೇಳಿದರು.

ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಹೊರಾಂಗಣದಲ್ಲಿ ಭಾನುವಾರ ತುಂಗಭದ್ರಾ ಫಿಲ್ಮ್ಸನ ಬ್ರಹ್ಮಶ್ರೀ ನಾರಾಯಣ­ಗುರುಸ್ವಾಮಿ ತುಳು ಚಲನಚಿತ್ರದ ಮುಹೂರ್ತ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆ ವಹಿಸಿ­ದ್ದರು. ಮೂಲ್ಕಿ ಸುವರ್ಣ ಆರ್ಟ್ಸ್‌ನ ಪರ­ವಾಗಿ ಕನ್ನಡ ಚಿತ್ರನಟ ದರ್ಶನ್‌ ಅವರನ್ನು ವಿಶೇಷ­ವಾಗಿ ಸನ್ಮಾನಿಸಲಾಯಿತು. ಸಂಸದ ಜಯ­ಪ್ರಕಾಶ್ ಹೆಗ್ಡೆ ಕ್ಯಾಮೆರಾಕ್ಕೆ ಚಾಲ­ನೆ ನೀಡಿ­ದರು. ಪ್ರಥಮ ದೃಶ್ಯಕ್ಕೆ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಾಪ್ ಮಾಡಿದರು. ಸಿನಿಮಾದ ಸಂಭಾ­ಷಣೆ ಬರೆದಿ­ರುವ ಸುಧಾಕರ ಬನ್ನಂಜೆ ಕಲಾ­ವಿ­ದರನ್ನು ಮತ್ತು ತಂತ್ರಜ್ಞರನ್ನು ಪರಿಚಯಿಸಿ­ದರು.

ಕೇರಳದ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ, ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಉಮಾ­ನಾಥ ಕೋಟ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಚಿತ್ರದ ನಾರಾಯಣಗುರು ಪಾತ್ರಧಾರಿ ವೆಂಕಟಾದ್ರಿ ಬೆಂಗಳೂರು, ನಿರ್ಮಾಪಕ ಮತ್ತು ನಿರ್ದೇಶಕ ರಾಜಶೇಖರ್ ಕೋಟ್ಯಾನ್, ಮೂಲ್ಕಿ ಚಂದ್ರ­ಶೇಖರ ಸುವರ್ಣ, ಧನಂಜಯ ಶಾಂತಿ, ನರೇಶ್ ಇದ್ದರು.

ಕಥೆ ಕೇಳಿ ರೋಮಾಂಚನ
ನಾರಾಯಣಗುರುಗಳ ಬಗ್ಗೆ ಅಧ್ಯಯನ ನಡೆಸಿ, ಅವರ ಬಗ್ಗೆ ಹೇಳಿದಾಗ ಮೈ ರೋಮಾಂಚನ­ವಾಯಿತು. ಇಂತಹ ಸಿನಿಮಾಗಳನ್ನು ಜನರು ಮುಕ್ತ­ವಾಗಿ ಸ್ವೀಕರಿಸಬೇಕು, ಯುವಜನತೆಗೆ ಇಂತಹ ಸಾಧಕರನ್ನು ಅರಿಯಲು ಚಿತ್ರ ಸಹಕಾರಿ ಆಗುತ್ತದೆ. ಜತೆಗೆ ಕೇಂದ್ರ ಮತ್ತು ರಾಜ್ಯಮಟ್ಟದ ಎಲ್ಲಾ ಪ್ರಶಸ್ತಿಗಳು ಈ ಚಿತ್ರಕ್ಕೆ ಸಿಗಲಿ.

–ದರ್ಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT