ಮೂಲ್ಕಿ: ಆಧ್ಯಾತ್ಮಿಕ ಚಿಂತನೆಯಿಂದ ನೂರು ವರ್ಷದ ಹಿಂದೆಯೇ ಕ್ರಾಂತಿಯನ್ನು ಮಾಡಿದ ನಾರಾಯಣಗುರುಗಳ ಸಂದೇಶ ಇಂದು ಕತ್ತಲಲ್ಲಿರುವ ದೇಶಕ್ಕೆ ಅಗತ್ಯವಾಗಿ ಬೆಳಕಾಗಬೇಕಾಗಿದೆ. ಸಾಮಾಜಿಕ ಪರಿವರ್ತನೆಗೆ ನಾರಾಯಣಗುರುಗಳು ಪ್ರೇರಕ ಶಕ್ತಿ ಆಗಿರುವುದರಿಂದ ವ್ಯಾಪಾರೀಕರಣವಾಗಿರುವ ಇಂದಿನ ಚಿತ್ರರಂಗದಲ್ಲಿ ಕಲಾತ್ಮಕತೆಯ ಚಿತ್ರವಾಗಿ ಬ್ರಹ್ಮಶ್ರೀ ನಾರಾಯಣಗುರು ತುಳು ಸಿನಿಮಾ ವಿಭಿನ್ನವಾಗಿ ಬೆಳೆಗಬೇಕು. ಈ ಚಿತ್ರದಿಂದ ರಾಷ್ಟ್ರಮಟ್ಟದಲ್ಲಿ ಗುರುಗಳ ತತ್ವಾದರ್ಶವನ್ನು ಪಸರಿಸಲಿ ಎಂದು ಸಂಸದ ನಳಿನ್ಕುಮಾರ್ ಕಟೀಲು ಹೇಳಿದರು.
ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಹೊರಾಂಗಣದಲ್ಲಿ ಭಾನುವಾರ ತುಂಗಭದ್ರಾ ಫಿಲ್ಮ್ಸನ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ತುಳು ಚಲನಚಿತ್ರದ ಮುಹೂರ್ತ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಸುವರ್ಣ ಆರ್ಟ್ಸ್ನ ಪರವಾಗಿ ಕನ್ನಡ ಚಿತ್ರನಟ ದರ್ಶನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಂಸದ ಜಯಪ್ರಕಾಶ್ ಹೆಗ್ಡೆ ಕ್ಯಾಮೆರಾಕ್ಕೆ ಚಾಲನೆ ನೀಡಿದರು. ಪ್ರಥಮ ದೃಶ್ಯಕ್ಕೆ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಾಪ್ ಮಾಡಿದರು. ಸಿನಿಮಾದ ಸಂಭಾಷಣೆ ಬರೆದಿರುವ ಸುಧಾಕರ ಬನ್ನಂಜೆ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಪರಿಚಯಿಸಿದರು.
ಕೇರಳದ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ, ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಚಿತ್ರದ ನಾರಾಯಣಗುರು ಪಾತ್ರಧಾರಿ ವೆಂಕಟಾದ್ರಿ ಬೆಂಗಳೂರು, ನಿರ್ಮಾಪಕ ಮತ್ತು ನಿರ್ದೇಶಕ ರಾಜಶೇಖರ್ ಕೋಟ್ಯಾನ್, ಮೂಲ್ಕಿ ಚಂದ್ರಶೇಖರ ಸುವರ್ಣ, ಧನಂಜಯ ಶಾಂತಿ, ನರೇಶ್ ಇದ್ದರು.
ಕಥೆ ಕೇಳಿ ರೋಮಾಂಚನ
ನಾರಾಯಣಗುರುಗಳ ಬಗ್ಗೆ ಅಧ್ಯಯನ ನಡೆಸಿ, ಅವರ ಬಗ್ಗೆ ಹೇಳಿದಾಗ ಮೈ ರೋಮಾಂಚನವಾಯಿತು. ಇಂತಹ ಸಿನಿಮಾಗಳನ್ನು ಜನರು ಮುಕ್ತವಾಗಿ ಸ್ವೀಕರಿಸಬೇಕು, ಯುವಜನತೆಗೆ ಇಂತಹ ಸಾಧಕರನ್ನು ಅರಿಯಲು ಚಿತ್ರ ಸಹಕಾರಿ ಆಗುತ್ತದೆ. ಜತೆಗೆ ಕೇಂದ್ರ ಮತ್ತು ರಾಜ್ಯಮಟ್ಟದ ಎಲ್ಲಾ ಪ್ರಶಸ್ತಿಗಳು ಈ ಚಿತ್ರಕ್ಕೆ ಸಿಗಲಿ.