ಮಂಗಳೂರು: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಹೆದ್ದಾರಿ ವಿಸ್ತರಣೆ ಸಂದರ್ಭ ಆಗುವ ಹಾನಿ ತಪ್ಪಿಸಲೆಂದೇ ಸುರಂಗ ಮಾರ್ಗ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಆಸ್ಕರ್ ಫರ್ನಾಂಡಿಸ್ ಇಲ್ಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಜಪಾನ್ನ ರಾಯಭಾರಿ ಹಾಗೂ ಸಚಿವರ ಜತೆ ಮಾತುಕತೆ ಆಗಿದೆ. ಯೋಜನೆಗೆ ಜಪಾನ್ ಸರ್ಕಾರ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದೆ. ಯೋಜನೆಗೆ ತಗಲುವ ವೆಚ್ಚ ಇನ್ನೂ ನಿರ್ಧಾರವಾಗಿಲ್ಲ. ಯೋಜನೆ ಯಲ್ಲಿ ರಾಜ್ಯ ಸರ್ಕಾರವೂ ಕೈ ಜೋಡಿಸ ಬೇಕಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪ ಯೋಗಿ ಸಚಿವರ ಜತೆಗೂ ಮಾತುಕತೆ ನಡೆಸಲಾಗಿದೆ ಎಂದರು.
ಕುಂದಾಪುರ– ತಲಪಾಡಿ ಹೆದ್ದಾರಿ ಬಗ್ಗೆ ಇತ್ತೀಚೆಗೆ ಸಭೆ ನಡೆದಿದ್ದು, ಈ ಕುರಿತು ಪೂರ್ಣ ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇದಾರನಾಥದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಅಲ್ಲಿನ ರಸ್ತೆಯ ಬುಡವೇ ಕುಸಿದಿದೆ. ಅಲ್ಲಿ ರಸ್ತೆ ನಿರ್ಮಾಣ ಮಾಡುವುದು ತಾಂತ್ರಿಕ ಸವಾಲು. ಸದ್ಯ 4 ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ನಿರ್ಮಾಣ ಸವಾಲಿನ ಕೆಲಸ ಆಗಿದೆ ಎಂದರು.
ಅವರ ದಾರಿ ಅವರಿಗೆ: ಕಾಂಗ್ರೆಸ್ ತನ್ನ ದಾರಿಯಲ್ಲಿ ಹೋಗುತ್ತಿದ್ದು, ಬಿಜೆಪಿ ಅದರ ದಾರಿಯಲ್ಲಿ ಹೋಗುತ್ತಿದೆ. ಆದ್ದರಿಂದ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವು ದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಆಸ್ಕರ್ ಉತ್ತರಿಸಿದರು.