ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾನೊ ರೈಲು ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಸೌಕರ್ಯ ಸಚಿವ ಸಂತೋಷ್ ಲಾಡ್ ಹೇಳಿದರು.
ಸರ್ಕಾರಿ, ಖಾಸಗಿ ಸಹಭಾಗಿತ್ವದ ಈ ಯೋಜನೆಗೆ ಶೀಘ್ರ ಸ್ಪಷ್ಟ ರೂಪ ನೀಡಲಾಗುವುದು ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಲೇಷ್ಯಾದ ಕಂಪೆನಿಯೊಂದು ಬೆಂಗಳೂರು, ಹುಬ್ಬಳ್ಳಿ – ಧಾರವಾಡ ದಲ್ಲಿ ಮಾನೊ ಸೇವೆ ಆರಂಭಿಸಲು ಮುಂದೆ ಬಂದಿದೆ. ಇದರ ರೂಪುರೇಷಗಳನ್ನು ಅಂತಿಮಗೊಳಿಸಿ ಆಸಕ್ತಿ ವ್ಯಕ್ತಪಡಿಸುವಿಕೆಗೆ ಬಹಿರಂಗ ಆಹ್ವಾನ ನೀಡಲಾಗುವುದು ಎಂದರು.
ಮೊದಲ ಹಂತದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ – ಧಾರವಾಡದಲ್ಲಿ ಮಾನೊ ರೈಲು ಸೇವೆ ಆರಂಭಿಸುವ ಉದ್ದೇಶವಿದೆ. ಮಾನೊ ರೈಲು ಯೋಜನೆಗೆ ಒಂದು ಕಿ.ಮೀ.ಗೆ ರೂ.80 ರಿಂದ ರೂ.100 ಕೋಟಿ ವೆಚ್ಚವಾಗುವ ಅಂದಾಜಿದೆ. ಬೆಂಗಳೂರಿನಲ್ಲಿ 35 ಕಿ.ಮೀ., ಹುಬ್ಬಳ್ಳಿ – ಧಾರವಾಡದಲ್ಲಿ 22 – 25 ಕಿ.ಮೀ. ಮಾನೊ ರೈಲು ಸೇವೆ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ವಿಮಾನ ನಿಲ್ದಾಣ ವ್ಯರ್ಥ: ಶಿವಮೊಗ್ಗ, ವಿಜಾಪುರ, ಹಾಸನ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಕಾರ್ಯಸಾಧುವಲ್ಲ ಎಂದು ಖಾಸಗಿ ಸಂಸ್ಥೆಗಳು ತಿಳಿಸಿವೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಪತ್ರ ಬರೆಯಲಾಗಿದೆ ಎಂದರು
ಈ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸಂಬಂಧಪಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಪ್ರತ್ಯೇಕ ಸೆಸ್ ಸಂಗ್ರಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಪ್ರಗತಿಯಲ್ಲಿರುವ 14 ರೈಲ್ವೆ ಯೋಜನೆಗಳ ಪೈಕಿ ಎರಡು ಪೂರ್ಣಗೊಂಡಿವೆ. ಇನ್ನುಳಿದ 12 ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿವೆ. ಈ ಯೋಜನೆಗಳಿಗೆ ರಾಜ್ಯದ ಪಾಲಿನ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.
ಹೊಸ ವಾರ್ತಾ ನೀತಿ
ಬೆಂಗಳೂರು: ಸರ್ಕಾರದ ಎಲ್ಲ ಜಾಹೀರಾತುಗಳನ್ನು ವಾರ್ತಾ ಇಲಾಖೆಯ ಮೂಲಕ ನೀಡಲು ಅವಕಾಶ ಕಲ್ಪಿಸಿ ಕೊಡುವ ನೂತನ ವಾರ್ತಾ ನೀತಿಯನ್ನು ಒಂದು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ವಾರ್ತಾ ಸಚಿವರೂ ಆದ ಸಂತೋಷ್ ಲಾಡ್ ತಿಳಿಸಿದರು.
ವಾರ್ತಾ ಇಲಾಖೆಯ ಡಿಜಿಟಲೀಕರಣ, ಆನ್ಲೈನ್, ಟ್ವಿಟರ್, ಎಸ್ಎಂಎಸ್ ಬಳಕೆಗೆ ಉತ್ತೇಜನ ನೀಡುವುದು ಇತ್ಯಾದಿ ಅಂಶಗಳು ಹೊಸ ನೀತಿಯಲ್ಲಿ ಸೇರಿರುತ್ತವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.