ತುಮಕೂರು: ‘ತುಮಕೂರು ವಿಶ್ವವಿದ್ಯಾಲಯದ ನಿರ್ಗಮಿತ ಕುಲಪತಿ ಡಾ.ಎಸ್.ಸಿ. ಶರ್ಮಾ ಅವಧಿಯಲ್ಲಿ 6 ಮಂದಿಗೆ ನೋಂದಣಿಯಾದ ಎಂಟು ತಿಂಗಳಲ್ಲಿಯೇ ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಡಾಕ್ಟರೇಟ್ (ಪಿಎಚ್.ಡಿ) ನೀಡಿರುವುದು ತಪ್ಪು. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ತಿಳಿಸಿದರು.
‘ಅರೆಕಾಲಿಕ ಸಂಶೋಧನೆಯಾದರೆ 36 ತಿಂಗಳಾಗಿರಬೇಕು. ಪೂರ್ಣಕಾಲಿಕ ಸಂಶೋಧನೆಯಾದರೆ ಎರಡು ವರ್ಷವಾಗಿರಬೇಕು ಎಂದು ಯುಜಿಸಿ ನಿಯಮಾವಳಿ ರೂಪಿಸಿದೆ. ಆದರೆ, ಈ ಆರು ಮಂದಿ ವಿಷಯದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಇದು ತಪ್ಪು’ ಎಂದು ಘಟಿಕೋತ್ಸವ ಸಂಬಂಧ ವಿವರ ನೀಡಲು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಸಿಂಡಿಕೇಟ್, ಶೈಕ್ಷಣಿಕ ಪರಿಷತ್ತು, ಕುಲಾಧಿಪತಿಯೂ ಆದ ರಾಜ್ಯಪಾಲರ ಅನುಮತಿ ಪಡೆದು ಪಿಎಚ್.ಡಿ ತಾತ್ಪೂರ್ತಿಕ ಪದವಿ ಪ್ರಮಾಣ (ಪಿಡಿಸಿ) ಪತ್ರವನ್ನೂ ವಿತರಿಸಲಾಗಿದೆ. ಭಾನುವಾರದ ಘಟಿಕೋತ್ಸವದಲ್ಲಿ ಆ ಆರು ಮಂದಿಗೆ ಪದವಿ ಪ್ರಮಾಣ ಪತ್ರ ತಡೆಯಲು ಸಾಧ್ಯವಾಗದು’ ಎಂದರು.