ಬಳ್ಳಾರಿ: ಸಂಗೀತ ಕ್ಷೇತ್ರಕ್ಕೆ ಡಾ.ಪಂಡಿತ ಪುಟ್ಟರಾಜ ಗವಾಯಿಯವರ ಕೊಡುಗೆ ಅಪಾರ ಎಂದು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಸಂಗೀತ ಶಿಕ್ಷಕರು ಹಾಗೂ ಶ್ರೀಗುರು ಪುಟ್ಟರಾಜ ಕಲಾ ಬಳಗದ ವತಿಯಿಂದ ಪಂಡಿತ್ ಪುಟ್ಟರಾಜ ಗವಾಯಿಯವರ 3ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕತೆಗೆ ಆದ್ಯತೆ ನೀಡಿದ ಗಾನಯೋಗಿ ಪುಟ್ಟರಾಜ ಗವಾಯಿಯವರು ಜಾತಿ, ಮತ, ಭೇದವಿಲ್ಲದೆ ರಾಜ್ಯದ ವಿವಿಧ ಭಾಗದ ಅಂಧರಿಗೆ ಸಂಗೀತ ಜ್ಞಾನ ಧಾರೆ ಎರೆದಿದ್ದಾರೆ ಎಂದು ರೈತ ಮುಖಂಡ ಚಾಮರಾಜ ಮಾಲಿಪಾಟೀಲ್ ಹೇಳಿದರು.
ಅರಳಿಹಳ್ಳಿಯ ರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ದಯ್ಯ ತಾತನವರು ಕಾರ್ಯಕ್ರಮ ಉದ್ಘಾಟಿಸಿದರು. ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಪ್ಪಗಲ್ಲು ಕರಿಬಸಯ್ಯ ಶಾಸ್ತ್ರಿ, ಲೋಕೇಶ್, ಶಾಂತೇಶ, ಚನ್ನಬಸವ ತುಲಾಭಾರ ನೆರವೇರಿಸಿದರು. ಪಂ. ಪುಟ್ಟರಾಜ ಗವಾಯಿಯವರ ಕುರಿತ ‘ಭಕ್ತಿ ಸಂಗಮ’ ಸಿ.ಡಿಯನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.
ನಾಗಭೂಷಣ ಬಾಪೂರ, ವಿ.ಎಂ. ವೀರಭದ್ರಯ್ಯ, ದೊಡ್ಡಯ್ಯ ಕಲ್ಲೂರು, ಪಲ್ಲವಿ, ಅನುಷಾ ಕಾಡ್ಲೂರು, ಅಪರ್ಣಿತಾ ಅವರಿಮದ ಗಾಯನ ಕಾರ್ಯಕ್ರಮ ನಡೆಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಎನ್.ತಿಪ್ಪಣ್ಣ, ಎಸ್. ಗುರುಲಿಂಗನಗೌಡ, ಸಾಹುಕಾರ್ ಸತೀಶಬಾಬು, ಗುತ್ತಿಗನೂರು ವಿರೂಪಾಕ್ಷಗೌಡ, ಸೋಮಲಿಂಗನಗೌಡ, ದರೂರು ಪುರುಷೋತ್ತಮಗೌಡ, ದರೂರು ಶಾಂತನಗೌಡ, ಹಾವಿನಾಳ್ ಬಸವರಾಜ್, ಕೊಳಗಲ್ಲು ಚೆನ್ನನಗೌಡ, ಕೆ.ಎಂ. ಪಾರ್ವತಮ್ಮ, ಮೃತ್ಯುಂಜಯಸ್ವಾಮಿ, ಕೆ.ಬಿ ಸಿದ್ದಲಿಂಗಪ್ಪ, ನಿಷ್ಠಿ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.