ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕಗಳು ಸಂಗಾತಿತನ, ಅಂತಃಕರಣ, ತಿಳಿವಳಿಕೆ ಎಲ್ಲವನ್ನೂ ಕೊಟ್ಟಿವೆ...’

ಸಾಹಿತ್ಯ ಸಾಂಗತ್ಯ
Last Updated 30 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಭಾರತೀಯ ಸಾಹಿತ್ಯದೊಂದಿಗೆ ಜಗತ್ತಿನ ಸಾಹಿತ್ಯವನ್ನೂ ನೀವು ಓದಿಕೊಂಡಿದ್ದೀರಿ. ಓದನ್ನು ತೀರಾ ಹಚ್ಚಿಕೊಂಡದ್ದು ಯಾವಾಗ? ಹೇಗೆ ಈ ಓದಿನ ಪ್ರಯಾಣ ಆರಂಭವಾಯಿತು?
ಪುಸ್ತಕಗಳ ಜೊತೆಗೆ ನನ್ನ ಸಹಬಾಳ್ವೆ ಅದೆಷ್ಟು ಸುದೀರ್ಘವಾಗಿದೆಯೆಂದರೆ ಅದು ಎಂದು ಮತ್ತು ಹೇಗೆ ಶುರುವಾಯಿತು ಎಂದು ಹೇಳುವುದು ಕಷ್ಟ. ನೆನಪಿರುವುದು ಇಷ್ಟು; ನನ್ನ ತಂದೆ ನನಗೆ ಮನೆಯಲ್ಲಿಯೇ ಅಕ್ಷರಗಳನ್ನು ಓದಲು ಹೇಳಿಕೊಟ್ಟಿದ್ದರು. ಹೀಗಾಗಿ ಶಾಲೆಗೆ ಸೇರುವ ಹೊತ್ತಿಗೆ ಓದಲು ಕಲಿತುಕೊಂಡಿದ್ದೆ. ನಾನು ಹುಟ್ಟಿದ್ದು ಬಡ ಕುಟುಂಬದಲ್ಲಿ. ಆದರೆ, ನನ್ನ ತಂದೆಗೂ ಓದಿನ ಬಗ್ಗೆ ಆಸಕ್ತಿಯಿದ್ದಿದ್ದರಿಂದ ಅವರು ಪುಸ್ತಕಗಳನ್ನು ಕೊಂಡು ಮನೆಯಲ್ಲಿಯೇ ನನ್ನ ಅಕ್ಕನ ಹೆಸರಿನಲ್ಲಿ Saroj Home Library ಒಂದನ್ನು ಮಾಡಿಕೊಂಡಿದ್ದರು.


ಆದರೆ, 19ನೇ ವರ್ಷದಲ್ಲಿ ರೇಲ್ವೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಸ್ವತಃ ಅವರ ಓದು ನಿಂತುಹೋಯಿತು. ಅವರು ಮನೆಗೆ ಮನೋಹರ ಗ್ರಂಥಮಾಲೆಯ ಪುಸ್ತಕಗಳನ್ನು, ದೀಪಾವಳಿ ಸಂಚಿಕೆಗಳನ್ನು ತರಿಸುತ್ತಿದ್ದರು. ನನ್ನ ತಾಯಿ ಆರನೇ ತರಗತಿ ಮಾತ್ರ ಓದಿದ್ದರೂ ಪುಸ್ತಕಗಳನ್ನು ಓದುತ್ತಿದ್ದರು. ಹೀಗಾಗಿ ಬಡತನವಿದ್ದರೂ ಪುಸ್ತಕಗಳ ಬಡತನವಿರಲಿಲ್ಲ. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ವರ್ಗವಾಗಿ ಬಂದ ಮೇಲೆ ನನ್ನ ತಂದೆ ನನಗೆ ಅಲ್ಲಿಯ ಸಾರ್ವಜನಿಕ ಗ್ರಂಥಾಲಯದಲ್ಲಿ ಸದಸ್ಯತ್ವ ಕೊಡಿಸಿದರು. ಅಲ್ಲಿಂದಾಚೆಗೆ ಹುಬ್ಬಳ್ಳಿ, ಧಾರವಾಡದ ಸಾರ್ವಜನಿಕ ಗ್ರಂಥಾಲಯಗಳು ನನ್ನನ್ನು ಪುಸ್ತಕಲೋಕಕ್ಕೆ ಪರಿಚಯಿಸಿದವು. ಓದುವುದು ನನಗೆ passion ಆಗಿಬಿಟ್ಟಿತು.

ಹುಬ್ಬಳ್ಳಿ ರೇಲ್ವೆ ಸ್ಟೇಷನ್ ನಲ್ಲಿ Higgin Botham ಪುಸ್ತಕದ ಮಳಿಗೆ ಇತ್ತು. ಅಲ್ಲಿಯ ಪಾರ್ಸಲ್ ಆಫೀಸ್ ನಲ್ಲಿ ಗುಮಾಸ್ತರಾಗಿದ್ದ ನನ್ನ ತಂದೆಯ ವಶೀಲಿ ಉಪಯೋಗಿಸಿ ಬೆಳಿಗ್ಗೆ ಆ ಮಳಿಗೆಯಿಂದ ಪುಸ್ತಕ ತಂದು, ಅದಕ್ಕೆ ಕವರ್ ಹಾಕಿ ಜೋಪಾನವಾಗಿ ಓದಿ ಸಾಯಂಕಾಲ ಮತ್ತೆ ವಾಪಸ್ಸು ಕೊಡುತ್ತಿದ್ದೆ. ಏಕೆಂದರೆ ಅಲ್ಲಿದ್ದ ಇಂಗ್ಲಿಷ್ ಪುಸ್ತಕಗಳನ್ನು ಕೊಳ್ಳಲು ನಮಗೆ ಆಗುತ್ತಿರಲಿಲ್ಲ. ಹೀಗಾಗಿ ವೇಗವಾಗಿ ಓದುವುದನ್ನು ಕಲಿತೆ! ಮುಖ್ಯವೆಂದರೆ ನಮ್ಮ ಬಾಲ್ಯದಲ್ಲಿ ಬಹುಪಾಲು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಎರಡು ಹೊತ್ತಿನ ಊಟದ ಜೊತೆಗೆ ಪುಸ್ತಕಗಳೂ ಇರುತ್ತಿದ್ದವು. ಅಥವಾ ಹೇಗೋ ತಂದು ಅವುಗಳನ್ನು ಓದಬೇಕೆನ್ನುವ ವಾತಾವರಣವಿತ್ತು.

ನಾನು ಓದಿದ ಬಾಗಲಕೋಟೆಯ ‘ಮೂರನೇ ನಂಬರ್ ಸಾಲಿ’, ಹುಬ್ಬಳ್ಳಿಯ ಫಾತಿಮಾ ಸ್ಕೂಲ್ ಹಾಗೂ ಲ್ಯಾಮಿಂಗ್ಟನ್ ಶಾಲೆಯ ಶಿಕ್ಷಕರು ಸಾಹಿತ್ಯದ ಬಗ್ಗೆ ಆಸಕ್ತಿ ಕುದುರಿಸಿದರು. ಆಗ ನನಗೆ ಮಾರ್ಗದರ್ಶನ ಕೊಟ್ಟಿದ್ದು ನನ್ನ ದೊಡ್ಡಮ್ಮನ ಮಗನಾದ ವೀರಣ್ಣ ಐವಳ್ಳಿ (ಇವರು ಮುಂದೆ ಭಾರತದ ಪ್ರಖ್ಯಾತ ಐಪಿಎಸ್ ಅಧಿಕಾರಿಯಾದರು).

ನಾನು ಆರನೇ ತರಗತಿಯಲ್ಲಿದ್ದಾಗ ಕನ್ನಡದ ಶ್ರೇಷ್ಠ ಕಾದಂಬರಿಗಳನ್ನು ಓದಿ ಅವುಗಳ ಬಗ್ಗೆ ಪ್ರಬಂಧಗಳನ್ನು ಬರೆಸಿದರು. ಹೀಗಾಗಿ ನನ್ನ ಹನ್ನೊಂದನೆಯ ವಯಸ್ಸಿನಿಂದ ಕನ್ನಡ ಕಾದಂಬರಿಗಳು ನನ್ನ ಜೀವನದ ಭಾಗಗಳಾಗಿವೆ.

ನಂತರ ಅವರದೇ ಮನೆಯಲ್ಲಿ ಇಂಗ್ಲಿಷ್ ಸಾಹಿತ್ಯದ ಮುಖ್ಯ ಕೃತಿಗಳನ್ನೆಲ್ಲಾ ಓದಲು ಸಾಧ್ಯವಾಯಿತು. ಗ್ರಹಾಮ್ ಗ್ರೀನ್, ಲಾರೆನ್ಸ್ ನಿಂದ ಶುರುಮಾಡಿ ಟಾಲ್ಸ್‌ಟಾಯ್‌, ದಾಸ್ತವಸ್ಕಿ ಇವರ ಕೃತಿಗಳನ್ನು ಬಹುಬೇಗನೆ ಓದಿದೆ.

ಮುಂದೆ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಈಗ ಕುವೆಂಪು ವಿಶ್ವವಿದ್ಯಾಲಯ ಹೀಗೆ ಉತ್ತಮ ಗ್ರಂಥಾಲಯಗಳು ನನ್ನ ಓದಿನ ಹಸಿವನ್ನು ತಣಿಸುತ್ತಾ ಬಂದಿವೆ. ಇವೆಲ್ಲ ವಿವರಗಳನ್ನು ಕೊಡಲು ಕಾರಣವೆಂದರೆ, ನಾವು ಬೆಳೆದ ಪರಿಸರದಲ್ಲಿ ಬಡತನ, ಸಣ್ಣ ಊರುಗಳು, ಪುಸ್ತಕದ ಅಂಗಡಿಗಳ ಕೊರತೆ ಇದಾವುದೂ ಓದುವ ಪ್ರೀತಿಗೆ ತೊಡಕಾಗಿರಲಿಲ್ಲ.

ಬಡತನದಿಂದ ಬಂದವರಿಗೆ ಪುಸ್ತಕಗಳ ಲೋಕವು ಶ್ರೀಮಂತವಾಗಿತ್ತು, ವಿಶಾಲವಾಗಿತ್ತು ಹಾಗೂ ಸಮಾನತೆಯುಳ್ಳ ಪ್ರಜಾಪ್ರಭುತ್ವವಾಗಿತ್ತು. ಆರು ಮನೆಗಳ, ಒಂದೇ ಇಕ್ಕಟ್ಟಾದ ಚಾಳಿನ ಸಣ್ಣ ಕೊಠಡಿಯಲ್ಲಿ ಓದುತ್ತಿದ್ದ ನಾನು ಯೂರೋಪಿನ ಸಾಹಿತ್ಯವನ್ನು ಓದುತ್ತಿದ್ದ ವಿಶ್ವಪ್ರಜೆಯಾಗಿದ್ದೆ. ಪುಸ್ತಕಗಳು ನನಗೆ ಸಂಗಾತಿತನ, ಅಂತಃಕರಣ, ತಿಳಿವಳಿಕೆ ಎಲ್ಲವನ್ನೂ ಕೊಟ್ಟಿವೆ. ಜೀವನದ ಅತ್ಯಂತ ನೋವಿನ ಗಳಿಗೆಗಳಲ್ಲಿ ನನ್ನ ಜೊತೆಗೆ ಇದ್ದು ಸಾಂತ್ವನ ನೀಡಿವೆ.

ಓದುವ ವಾತಾವರಣವಿತ್ತೇ? ಓದು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಪುಸ್ತಕಗಳು?
ನಾನು ಓದಿದ ವಾತಾವರಣದಿಂದ ಹಾಗೂ ನಾನು ಮೊದಲ ವರ್ಷ ಬಿ.ಎಸ್.ಸಿ.ವರೆಗೆ ವಿಜ್ಞಾನ ವಿದ್ಯಾರ್ಥಿಯಾಗಿದ್ದರಿಂದ ಸಾಹಿತ್ಯದ ನನ್ನ ಓದು ವ್ಯವಸ್ಥಿತವಾಗಿರಲಿಲ್ಲ (ಈಗಲೂ ‘ಇಲ್ಲ!’). ಇದರಿಂದ ಬಹಳ ಅನುಕೂಲವಾಯಿತು. ನನಗೆ ಇಷ್ಟವಾದ ಎಲ್ಲಾ ಪುಸ್ತಕಗಳನ್ನು ಓದುತ್ತಾ ಹೋದೆ. ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಕೃತಿಗಳೆಂದರೆ ಶಿವರಾಮ ಕಾರಂತರ ಹಾಗೂ ಟಾಲ್ಸ್‌ಟಾಯ್‌ ಅವರ ಕಾದಂಬರಿಗಳು. ನಾನೂ ಎಲ್ಲರ ಹಾಗೆ ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು,  ಎಸ್.ಎಲ್.ಭೈರಪ್ಪನವರ ‘ಧರ್ಮಶ್ರೀ’ ಇವುಗಳಿಂದ ಆರಂಭಿಸಿದವನು. ಆದರೆ, ಕಾರಂತರ ಕಾದಂಬರಿಗಳು ನನ್ನ ಜೀವನ ದೃಷ್ಟಿಯನ್ನು ರೂಪಿಸಿದವು. ದೇವರು, ಧರ್ಮ ಇವುಗಳ ಬದಲಾಗಿ ಮನುಷ್ಯರು ಹಾಗೂ ಸಮಾಜದ ಬಗ್ಗೆ ಅಪಾರವಾದ ಕಾಳಜಿ ಹಾಗೂ ಆಸಕ್ತಿಗಳನ್ನು ಅವರ ಕಾದಂಬರಿಗಳು ಹುಟ್ಟಿಸಿದವು.

ವಿಶೇಷವೆಂದರೆ ಕುವೆಂಪು ಅವರ ಕಾದಂಬರಿಗಳನ್ನು ನಾನು ಓದಿದ್ದು ಸ್ವಲ್ಪ ತಡವಾಗಿ. ಆದರೆ ಅವು ನನ್ನನ್ನು ಹೇಗೆ ಆವರಿಸಿಕೊಂಡಿವೆಯೆಂದರೆ ಅವು ನನ್ನ ಸಂವೇದನೆಯ ಭಾಗವಾಗಿಬಿಟ್ಟಿವೆ. ನಾವು ಬಲ್ಲ ದಿನನಿತ್ಯದ ಬದುಕು; ಅದೂ ಕನ್ನಡ ಪ್ರಾಂತ್ಯವೊಂದರ ಸಾಮಾನ್ಯ ಜಗತ್ತು. ಇವರ ಕಾದಂಬರಿಗಳಲ್ಲಿ ಇಡೀ ಮನುಷ್ಯಕುಲದ ಕತೆಯಾಗುವ ವಿಸ್ಮಯವು ನನ್ನನ್ನು ಬದಲಾಯಿಸಿಬಿಟ್ಟಿತು.

ಸಾಹಿತ್ಯವು ಜೀವಪರವಾದ ಮೌಲ್ಯಗಳನ್ನು ಹುಡುಕುವ ಮಾಧ್ಯಮವೆಂದು ಅರ್ಥವಾಯಿತು. ಬೇಂದ್ರೆ ಕಾವ್ಯ ನನ್ನ ಪಾಲಿಗೆ ಜಗತ್ತಿನ ಶ್ರೇಷ್ಠ ಕಾವ್ಯ. ನಾನು ಎಲ್ಲಾ ಬಗೆಯ ಕಾವ್ಯವನ್ನು ಓದುತ್ತೇನೆಯಾದರೂ ಬೇಂದ್ರೆ ಕಾವ್ಯದಲ್ಲಿ ಅನುಭವವು ತನ್ನ ಸಮಗ್ರ ಶರೀರದೊಂದಿಗೆ, ಕನ್ನಡದ ಲಯಗಳಲ್ಲಿ, ಭಾಷೆಯೇ ಅನುಭವವಾಗುವ ರೀತಿಯಲ್ಲಿ ನಮ್ಮ ಜೊತೆಗೆ ಸಂವಾದಿಸುತ್ತಿರುವಾಗಲೂ ಸಂಕೀರ್ಣವಾಗಿರುವ ರೀತಿ ನನಗೆ ಅತ್ಯುತ್ತಮ ಸಾಹಿತ್ಯದ ಮಾದರಿಯಾಗಿ ಕಂಡಿದೆ. ಇಷ್ಟು ಮಾತ್ರವಲ್ಲ, ನನ್ನ ಪಾಲಿಗೆ ಕನ್ನಡವೇ ನನಗೆ ವಿಶ್ವ, ಬ್ರಹ್ಮಾಂಡ ಹಾಗೂ ಬದುಕಿನ ಸಮಸ್ತ ಅನುಭವಲೋಕಗಳ ಜ್ಞಾನವನ್ನು ಕೊಡುವ ಆಕರ.

ಹೀಗಾಗಿ ’ವಡ್ಡಾರಾಧನೆ’ಯಿಂದ ಈಗ ಬಂದಿರುವ ಕನ್ನಡ ಕೃತಿಗಳು ನನಗೆ ನನ್ನ ಕಾಲ, ಸಮಾಜ ಹಾಗೂ ವಿಶ್ವವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಿವೆ. ಜನಪರ ಹೋರಾಟಗಳಲ್ಲಿ ಭಾಗವಹಿಸಿದಾಗ ಕೂಡ ಅದು ಸಾಹಿತ್ಯ ಕಲಿಸಿಕೊಟ್ಟ ಜವಾಬ್ದಾರಿ ಹಾಗೂ ತಿಳಿವಳಿಕೆಯಿಂದಾಗಿತ್ತು. ಹೋರಾಟಗಳು ನಮ್ಮನ್ನು ಅಸೂಕ್ಷ್ಮಗೊಳಿಸುತ್ತವೆ ಎನ್ನುವುದು ಸುಳ್ಳು. ಅವುಗಳಿಂದಲೇ ಸಾಹಿತ್ಯದ ಅನೇಕ ಸೂಕ್ಷ್ಮಸತ್ಯಗಳು ಹೊಳೆಯುತ್ತವೆಯೆನ್ನುವುದು ನನ್ನ ಅನುಭವ.

ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಯಾವುದು?
ನನಗೆ ಅನ್ನಿಸುವುದೆಂದರೆ ಅತ್ಯುತ್ತಮ ಸಾಹಿತ್ಯ ಕೃತಿಯು ಮೊದಲನೆಯದಾಗಿ ಭಾಷೆಯ ಮೂಲಕ ತನ್ನಷ್ಟಕ್ಕೆ ಸಮಗ್ರವೆನ್ನಿಸುವ ಅನುಭವ ಲೋಕವನ್ನು ಕಟ್ಟಿಕೊಡಬೇಕು. ರೂಢಿಗತವಾಗಿ ಬಂದ ನಮ್ಮ ತಿಳಿವಳಿಕೆಯನ್ನು ಮೂಲದಲ್ಲಿಯೇ ಪರಿವರ್ತಿಸುವ ಶಕ್ತಿ ಪಡೆದಿರಬೇಕು. ಒಂದು ಓದಿಗೆ ಅಥವಾ ಕೆಲವು ಓದುಗಳಿಗೆ ತೀರಿಹೋಗುವ ಬದಲು ಪ್ರತಿ ಓದಿನಲ್ಲೂ ಹೊಸದನ್ನು ಹೊತ್ತುತರುವ ಸತ್ವ ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರ ಬಗ್ಗೆ ನಮ್ಮ ಅಂತಃಕರಣವನ್ನು ಮಾಗಿಸುವಂತಿರಬೇಕು.

ನಿಮ್ಮ ಮೇಲೆ ಪ್ರಭಾವ ಬೀರಿದ ಕೃತಿಗಳು ಯಾವವು?
ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಕೃತಿಯೆಂದರೆ ಟಾಲ್ಸ್‌ಟಾಯ್‌ ಅವರ ‘War and Peace’ . ಹದಿಹರೆಯದಲ್ಲಿ ಅದನ್ನು ಓದಿದ್ದರಿಂದ ಕಾದಂಬರಿಯ ನತಾಶಾಳನ್ನು ನಾನು ಉತ್ಕಟವಾಗಿ ಪ್ರೀತಿಸಿದೆ. ನಾನು ಆ ಕಾದಂಬರಿಯ ಪಿಯರ್ ಪಾತ್ರವೆಂದು ಭ್ರಮಿಸಿದೆ. ಆದರೆ ಆ ಕೃತಿ ನಾನು ಇವೆಲ್ಲವನ್ನೂ ದಾಟಿಕೊಂಡು ಅದರೊಳಗಿನ ಅನನ್ಯ ಲೋಕಗಳನ್ನು ಪ್ರವೇಶಿಸುವಂತೆ ಮಾಡಿತು. 

ಜೀವನವನ್ನು ಇಷ್ಟು ನಿರಾಳವಾಗಿ ಇಷ್ಟ ಪಾರದರ್ಶಕವಾಗಿ ಇಷು ಸಮಗ್ರವಾಗಿ ಸಾಹಿತ್ಯವು ನೋಡಬಲ್ಲದು ಎನ್ನುವುದನ್ನು ಆಶ್ಚರ್ಯದಿಂದ ಕಂಡುಕೊಂಡೆ. ಒಬ್ಬ ಬರಹಗಾರ ತಾನು ಸೃಷ್ಟಿಸಿದ ಪಾತ್ರಗಳ ಪ್ರಜ್ಞೆ-, ಸುಪ್ತ ಪ್ರಜ್ಞೆಗಳಲ್ಲಿ ಪರಕಾಯ ಪ್ರವೇಶ ಮಾಡುವ ಪವಾಡದ ಅನುಭವವಾಯಿತು. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಇಷ್ಟೇ ಅದ್ಭುತವಾದ ಅನುಭವವನ್ನು ಕೊಟ್ಟಿತು.

ಇಂದಿನವರು ಓದುವುದರಿಂದ ವಿಮುಖರಾಗುತ್ತಿದ್ದಾರೆಯೇ?
ಇನ್ನು ಪುಸ್ತಕಗಳಿಗೆ ಭವಿಷ್ಯವಿಲ್ಲ; ನಮ್ಮ ಇಂದಿನ ಪೀಳಿಗೆಗಳು ಓದಿಗೆ ವಿಮುಖವಾಗುತ್ತಿವೆ ಎನ್ನುವುದನ್ನು ಸಾರಾಸಗಟಾಗಿ ಒಪ್ಪಲಾಗದು. ಇಂದು ಮಾಹಿತಿ ತಂತ್ರಜ್ಞಾನ, ಅಂತರ್ಜಾಲಗಳಿಗೆ ವಿಶ್ವದ ಯಾವುದೇ ಪುಸ್ತಕವನ್ನು ಕಣ್ಣೆದುರಿಗೆ ಕೆಲವೇ ಸೆಕೆಂಡುಗಳಲ್ಲಿ ತಂದಿಡುವ ಸಾಮರ್ಥ್ಯ ಇದೆ. ಹೀಗಾಗಿ ಅವುಗಳಿಂದ ನಾನು ಹಿಂದೆ ಕಲ್ಪಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ನನ್ನ ಓದು ವಿಸ್ತಾರವಾಗುತ್ತಿದೆ. ಆದರೆ ವಿಷಾದವೆಂದರೆ ಕನ್ನಡದ ಕೃತಿಗಳನ್ನು ಈ ಮಾಧ್ಯಮಗಳಿಗೆ ನಾವು ತರುತ್ತಿಲ್ಲ. ಅದರಿಂದಾಗಿ ಇಂದಿನ ಪೀಳಿಗೆಗೆ ಕನ್ನಡ ಕೃತಿಗಳು ದೊರಕದಂತೆ ನಾವೇ ಮಾಡಿದ್ದೇವೆ. ಇದು ಬದಲಾಗದಿದ್ದರೆ ಹೊಸ ತಲೆಮಾರುಗಳು ಕನ್ನಡ ಸಾಹಿತ್ಯ ಮಾತ್ರವಲ್ಲ, ಕನ್ನಡ ಭಾಷೆಯಿಂದಲೂ ವಿಮುಖವಾಗಿಬಿಡುತ್ತವೆ.

ಪುಸ್ತಕಗಳಿಗೆ ಭವಿಷ್ಯವಿಲ್ಲ ಎಂಬ ಕೊರಗುಗಳ ಬಗ್ಗೆ?
ಬಂಡವಾಳಶಾಹಿಯ ಭರಾಟೆಯ ಹಾಗೆ ಆಧುನಿಕ ತಂತ್ರಜ್ಞಾನವು ಮಾಧ್ಯಮಗಳ ಭರಾಟೆಯಿಂದಾಗಿ ಮನುಷ್ಯರು ತಮ್ಮ ಮನಸ್ಸಿನ ಸಾಧ್ಯತೆ, ಸಾಮರ್ಥ್ಯಗಳನ್ನು ದೂರವಿಟ್ಟಿದ್ದಾರೆ. ಹೀಗಾಗಿ ಪುಸ್ತಕಗಳಿಂದ ದೂರವಾಗುತ್ತಿರಬಹುದು. 

ಆದರೆ, ಜಗತ್ತಿನ ಚರಿತ್ರೆಯ ಅತ್ಯಂತ ಬರ್ಬರವಾದ ಯಹೂದಿಗಳ ಮಾರಣಹೋಮದಲ್ಲಿ ಉಳಿದುಬಂದವರೂ ಪುಸ್ತಕಗಳನ್ನು ಬರೆದರು. ಪುಸ್ತಕಗಳ ಸ್ವರೂಪ ಬದಲಾಗಬಹುದು. ಆದರೆ ಮನುಷ್ಯ ಅನುಭವದ ದಾಖಲೆ ಹಾಗೂ ಶೋಧನೆಯಾಗಿ ಅವು ನಮ್ಮ ಅಸ್ತಿತ್ವದ ಅವಶ್ಯಕತೆಗಳಾಗಿವೆ. ಜಗತ್ತಿನ ಮುಗಿಯಲಾರದ ಹಿಂಸೆಗಳಿಗೆ ಸಾಂತ್ವನ ದೊರೆಯುವುದು ಮನುಷ್ಯ ಪ್ರೀತಿ ಮತ್ತು ಪುಸ್ತಕಗಳಿಂದ. ಹೀಗಾಗಿ ಅವುಗಳಿಗೆ ಸಾವು ಇಲ್ಲ.

ಮಕ್ಕಳ ಸಾಹಿತ್ಯದ ಓದು ಹೇಗಿದೆ?
ಮಕ್ಕಳು ಏನನ್ನು ಓದಬೇಕು ಅಂದಾಗ ಮಕ್ಕಳ ಸಾಹಿತ್ಯವನ್ನು ಎಂದುಬಿಡುತ್ತೇವೆ. ಇದು ನನಗೆ ಒಪ್ಪಿಗೆಯಿಲ್ಲ. ತೀರಾ ಓದಿನ ಶುರುವಾತಿನಲ್ಲಿ ಮಾತ್ರ 'ಮಕ್ಕಳ ಸಾಹಿತ್ಯ'ವನ್ನು ಅವರು ಓದಬೇಕು. ಆದಷ್ಟು ಬೇಗನೇ ಕನ್ನಡದ ಉತ್ತಮ ಕೃತಿಗಳನ್ನು ಅವರು ಓದಬೇಕು. ಬೇಂದ್ರೆಯವರ ಅನೇಕ ಪದ್ಯಗಳು, ಮಾಸ್ತಿ ಹಾಗೂ ಕುವೆಂಪು ಅವರ ಸಣ್ಣ ಕತೆಗಳು, ತೇಜಸ್ವಿಯವರ ಬರಹ, ವಚನಗಳು, ಅನೇಕ ನವೋದಯ ಕವಿತೆಗಳು, ಇವುಗಳನ್ನು ಮಕ್ಕಳು ಓದಲಾರರು ಎಂದರೆ ನಾನು ನಂಬುವುದಿಲ್ಲ. 

ಬಹುಪಾಲು ಮಕ್ಕಳ ಸಾಹಿತ್ಯವು ಮಕ್ಕಳ ಬೌದ್ಧಿಕ ಹಾಗೂ ಭಾವನಾತ್ಮಕ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯಿಂದ ಬರೆದಂತೆ ತೋರುತ್ತದೆ. ಕನ್ನಡದ ಒಳ್ಳೆಯ ಸಾಹಿತ್ಯ ಒಂದು ಒಂದು ಮಟ್ಟದಲ್ಲಿ ಎಲ್ಲ ಓದುಗರನ್ನು, ಮಕ್ಕಳನ್ನೂ ತಲುಪಬಲ್ಲದು ಎಂದು ನನ್ನ ನಂಬಿಕೆ. ಒಳ್ಳೆಯ ಸಾಹಿತ್ಯ ಆಕರ್ಷಕವಲ್ಲ, ಓದಲು ಕಷ್ಟ ಎಂದು ಹೇಳಿ ಹೇಳಿ ನಾವು ಮಕ್ಕಳಿಗೆ ಜನಪ್ರಿಯ ಸಾಹಿತ್ಯದ junk foodಅನ್ನು ಮಾತ್ರ ಕೊಡುತ್ತಿದ್ದೇವೆ.

ಶಿವಮೊಗ್ಗದಂತಹ ಊರಿನಲ್ಲಿರುವುದು ನಿಮ್ಮ ಓದು ಬರಹಗಳಿಗೆ ಪೂರಕವಾಗಿದೆಯೇ? ಬೆಂಗಳೂರಿನಂಥ ಮಹಾನಗರದಲ್ಲಿದ್ದರೆ ಇನ್ನೂ ಹೆಚ್ಚಿನ ಅವಕಾಶ ಸಿಗುತ್ತಿತ್ತು ಎಂಬ ವಿಚಾರ ಎಂದಾದರೂ ಬಂದಿತ್ತೆ?
ನಾನು ಕಳೆದ 33 ವರ್ಷಗಳನ್ನು ಶಿವಮೊಗ್ಗೆಯಲ್ಲಿ ಕಳೆದಿದ್ದೇನೆ, ಎಷ್ಟೋ ಸಾರಿ ನನ್ನ ಅಧ್ಯಯನಕ್ಕೆ ಬೇಕಾದ ಪುಸ್ತಕಗಳು ದೊರೆಯದೇ ಹೋಗಿವೆ. ಇಷ್ಟಾದರೂ ನನ್ನ ಬರಹ, ಚಿಂತನೆಗಳು ಧಾರವಾಡ, ಶಿವಮೊಗ್ಗೆಯಂಥ ಊರುಗಳ ಸಮುದಾಯದಲ್ಲಿ ಬೇರುಬಿಟ್ಟಿವೆ. ನಾನು cosmopolitan ಬರಹಗಾರನಾಗಲಾರೆ. ಅದು ಕನ್ನಡದ ಸಂಪ್ರದಾಯವೂ ಅಲ್ಲ. 

ಬೇಂದ್ರೆ, ಮಳಿಯ ತಿಮ್ಮಪ್ಪಯ್ಯ, ಕುವೆಂಪು ಇವರೆಲ್ಲರೂ rooted cosmopolitan  ಮಾದರಿಯ ಬರಹಗಾರರು ಅಂದರೆ ನಮ್ಮ ಸ್ಥಳೀಯವಾದ ಸಂವೇದನೆಯನ್ನು ನೆಲಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಅದರೊಂದಿಗೆ ಸಮಕಾಲೀನ ಜಗತ್ತಿನ ಸಂವಾದ ನಡೆಯುವ ಹಾಗೆ ನಮ್ಮ ಬರಹ, ಚಿಂತನೆಗಳು ಆಗಬೇಕು. ಶಿವಮೊಗ್ಗ ಎಲ್ಲಾ ಚಳವಳಿಗಳ ಮತ್ತು ಅವುಗಳಿಗೆ ಕಾರಣವಾದ ಬಹುದೊಡ್ಡ ಪಲ್ಲಟಗಳ ತವರೂರಾಗಿದೆ. ನನ್ನ ಬರಹ ಅವುಗಳಿಂದ ರೂಪಿತವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT