ಬೆಂಗಳೂರು: ‘ಪೆಟ್ರೋಲ್ ದರ ಇಳಿಯಲಿದೆ. ಆದರೆ ಯಾವಾಗ, ಎಷ್ಟು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದೂ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಆದ್ದರಿಂದ ಪೆಟ್ರೋಲ್ ದರ ಇಳಿಸುವ ಚಿಂತನೆ ನಡೆದಿದೆ. ದರ ಇಳಿಕೆಯಿಂದ ತೈಲ ಕಂಪೆನಿಗಳಿಗೆ ನಷ್ಟವಾಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇರಾನ್ ಸೇರಿದಂತೆ ಅರಬ್ ರಾಷ್ಟ್ರಗಳಿಂದ ಶೇ 75ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2020ರ ವೇಳೆಗೆ ಆಮದು ಪ್ರಮಾಣ ವನ್ನು ಶೇ 50ಕ್ಕೆ ಇಳಿಸುವ ಉದ್ದೇಶವಿದೆ ಎಂದರು.
ಬಸ್ ದಿನ: ಪೆಟ್ರೋಲ್, ಡೀಸೆಲ್ ಉಳಿತಾಯ ಮಾಡುವ ಉದ್ದೇಶದಿಂದ ವಾರಕ್ಕೆ ಒಮ್ಮೆ ಬಸ್ ದಿನ ಆಚರಿಸು ವಂತೆ ಕೋರಿ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳು, ಕೇಂದ್ರ ಸಚಿವರಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಸರ್ಕಾರಿ ನೌಕರರು ವಾರದಲ್ಲಿ ಒಂದು ದಿನ ಬಸ್ನಲ್ಲಿ ಸಂಚರಿಸುವಂತೆ ಕೋರಲಾಗಿದೆ. ಇದು ಕಡ್ಡಾಯ ಅಲ್ಲ. ಆಯಾ ರಾಜ್ಯ ಸರ್ಕಾರಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.