ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲು ಪೋಸ್ಕೊ ಕಂಪೆನಿಗೆ ಜಮೀನು ನೀಡಲು ಹಳ್ಳಿಗುಡಿ ಗ್ರಾಮದ ಶೇ 85ರಷ್ಟು ರೈತರು ಸಿದ್ಧರಿದ್ದು, ಕಂಪೆನಿಯೊಂದಿಗೆ ಪುನಃ ಚರ್ಚಿಸಿ ಉಕ್ಕು ಘಟಕ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಹಳ್ಳಿಗುಡಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ರೈತರು ಭಾನುವಾರ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಳ್ಳಿಗುಡಿ ಗ್ರಾಮದ ರೈತ ಮುಖಂಡ ಸೋಮನಗೌಡ ಕರಮುಡಿ, ‘ಉಕ್ಕಿನ ಕಾರ್ಖಾನೆ ಸ್ಥಾಪಿಸಲು ತಾಲ್ಲೂಕಿನ ಒಟ್ಟು 536 ರೈತರ ಜಮೀನನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿತ್ತು. ಅದರಲ್ಲಿ 436 ರೈತರು ಜಮೀನು ನೀಡಲು ಒಪ್ಪಿಗೆ ನೀಡಿದ್ದರು. ಆದರೆ ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಮುಂಡರಗಿಯ ಡಾ.ಅನ್ನದಾನೀಶ್ವರ ಸ್ವಾಮಿಜಿ ಹಾಗೂ ಕೆಲವು ಪರಿಸರ ವಾದಿಗಳು ವಿರೋಧಿಸಿದರು. ಇದರಿಂದಾಗಿ ಪೋಸ್ಕೊ ಕಂಪೆನಿ ಇಲ್ಲಿಂದ ಕಾಲು ಕೀಳುವಂತಾಯಿತು’ ಎಂದರು.