ಮೂಡಿಗೆರೆ: ದೇಶದ ಪ್ರಜೆಗಳಿಗೆ ಮತದಾನ ಬಹುಮುಖ್ಯ ಹಕ್ಕಾಗಿದ್ದು, ಯಾರೊಬ್ಬ ಪ್ರಜೆಯೂ ಹಕ್ಕು ಚಲಾವಣೆಯನ್ನು ಮರೆಯದೇ ಮತದಾನದಲ್ಲಿ ಪಾಲ್ಗೊಂಡು ದೇಶದ ಆಡಳಿತಕ್ಕೆ ಕೈಜೋಡಿಸಬೇಕು ಎಂದು ತಹಶೀಲ್ದಾರ್ ಶಾರದಾಂಬಾ ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ಏರ್ಪಡಿಸಿದ್ದ ಮತದಾನದ ಜಾಗೃತಿಗಾಗಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಆಡಳಿತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಭಾರತ ಸಂವಿಧಾನವು ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದ್ದು, ಇಂತಹ ಪವಿತ್ರ ಹಕ್ಕನ್ನು ಯಾರೂ ಸಹ ಮರೆಯಬಾರದು.
ಮತದಾನದ ಮೂಲಕ ದೇಶದ ಆಡಳಿತವನ್ನು ರೂಪಿಸಲು ಎಲ್ಲಾ ಹಕ್ಕುದಾರರು ಮುಂದಾಗಬೇಕು, ಈ ಹಕ್ಕನ್ನು ಯಾರೂ ಮರೆಯದೇ ಇದೇ 17 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿ ಶೇ 100 ಮತದಾನವಾಗಲು ಮುಂದಾಗಬೇಕು ಎಂದರು.
ಮತದಾನದ ದಿನವನ್ನು ಸಾರ್ವತ್ರಿಕ ರಜೆ ದಿನವನ್ನಾಗಿ ಸರ್ಕಾರದಿಂದ ಘೋಷಿಸಲಾಗಿದೆ, ಆದ್ದರಿಂದ ಯಾರೂ ಸಹ ಚುನಾವಣೆಗೆ ರಜೆಯಾಗುತ್ತದೆ ಎಂಬ ಭಾವನೆ ತಾಳದೇ, ಎಲ್ಲರೂ ಮತಗಟ್ಟೆಗೆ ತೆರಳಿ ಹಕ್ಕನ್ನು ಚಲಾಯಿಸಬೇಕು ಎಂದರು. ಮತದಾನದ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳೂ ಅನುಭವಿಸುವಂತಾಗಲು ದೇಶದಲ್ಲಿನ ಶಿಕ್ಷಿತರು ಮತ್ತು ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದ್ದು, ಮತದಾನದ ಮಹತ್ವವನ್ನು ತಾವೂ ಅರಿಯುವ ಮೂಲಕ, ತಮ್ಮ ಸುತ್ತಮುತ್ತಲ ಹಕ್ಕುದಾರರಿಗೂ ತಿಳಿಸಿ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ.