ಅಂಕೋಲಾ: ಹಂತಕರ ಗುಂಡಿಗೆ ಬಲಿಯಾದ ಸಹಕಾರಿ ಧುರೀಣ ಆರ್.ಎನ್. ನಾಯಕರ ಅಕಾಲಿಕ ನಿಧನಕ್ಕೆ ಸೋಮವಾರ ಪಟ್ಟಣದ ನಾಡವರ ಸಭಾಭವನದಲ್ಲಿ ಸಾರ್ವಜನಿಕರ ವತಿಯಿಂದ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಉಮೇಶ ಭಟ್, ‘ಆರ್.ಎನ್. ನಾಯಕರು ತಮ್ಮ ಪ್ರಭಾವಿ ವ್ಯಕ್ತಿತ್ವದ ಮೂಲಕ ಈ ಭಾಗದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅಪೂರ್ವ ಕೊಡುಗೆ ಸಲ್ಲಿಸಿದ್ದಾರೆ. ಸರಳ ಸಜ್ಜನ ವ್ಯಕ್ತಿಯನ್ನು ಹತ್ಯೆಗೈದಿರುವುದು ಖಂಡನೀಯ. ಅಗಲಿದ ನಾಯಕರು ಬಿಟ್ಟು ಹೋಗಿರುವ ಆದರ್ಶಗಳನ್ನು ಗೌರವಿಸೋಣ’ ಎಂದರು.
ಕಥೆಗಾರ ಡಾ.ರಾಮಕೃಷ್ಣ ಗುಂದಿ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ಸಲ್ಲಿಸಿದ್ದ ಆರ್.ಎನ್. ನಾಯಕರ ಅಗಲಿಕೆಯಿಂದ ಈ ಕ್ಷೇತ್ರ ಬಡವಾಗಿದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ’ ಎಂದರು.
ಹಿರಿಯ ಕವಿ ವಿಷ್ಣು ನಾಯ್ಕ ಮಾತನಾಡಿ, ‘ಆರ್.ಎನ್. ನಾಯಕ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು’ ಎಂದು ಭಾವುಕರಾದರು.
ನಾಮಧಾರಿ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಕೆ.ಎಲ್. ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಿನೋದ ನಾಯಕ, ಉದಯ ಡಿ. ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪ್ರಮುಖರಾದ ಅನಂತ ತಲಗೇರಿ, ರಮಾನಂದ ನಾಯಕ, ಡಾ.ಶಿವಾನಂದ ನಾಯಕ, ಜಗದೀಶ ಜಿ. ನಾಯಕ, ಎನ್.ವಿ. ನಾಯಕ, ಉಮೇಶ ನಾಯ್ಕ, ನಾಗಪತಿ ಹೆಗಡೆ, ಸಾಯಿ ಗಾಂವಕರ, ಗೋಪು ಅಡ್ಲೂರು ಸೇರಿದಂತೆ ಮುಂತಾದವರು ಆರ್.ಎನ್. ನಾಯಕ ಅವರನ್ನು ಸ್ಮರಿಸಿಕೊಂಡರು.
ಬಿಜೆಪಿಯಿಂದ ಸಂತಾಪ: ಪಟ್ಟಣದ ವೆಂಕಟ್ರಮಣ ದೇವಸ್ಥಾನದ ಪ್ರಾಂಗಣದಲ್ಲಿ ಸ್ಥಳೀಯ ಬಿಜೆಪಿ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಪ್ರಮುಖರು ಆರ್.ಎನ್. ನಾಯಕರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ನಾಯಕ, ಪ್ರಮುಖರಾದ ಭಾಸ್ಕರ ನಾರ್ವೇಕರ, ರಾಮಚಂದ್ರ ನಾಯ್ಕ, ನಾರಾಯಣ ನಾಯಕ, ವಿಜಯಕುಮಾರ ರಾಯ್ಕರ, ಸಂಜಯ ನಾಯ್ಕ ಭಾವಿಕೇರಿ, ಲೀಲಾವತಿ ನಾಯ್ಕ ಮಂಜಗುಣಿ, ರಾಜಮ್ಮ ನಾಯಕ, ಮಂಗಲಾ ನಾಯ್ಕ ಮುಂತಾದವರು ಆರ್.ಎನ್. ನಾಯಕರನ್ನು ಸ್ಮರಿಸಿದರು.
ಸಂತಾಪ
ಶಿರಸಿ: ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಸಹಕಾರಿ ಧುರೀಣ ಅಂಕೋಲಾದ ಆರ್.ಎನ್. ನಾಯಕ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದು, ನೋವನ್ನು ತಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ದುಷ್ಕೃತ್ಯದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.