ಧಾರವಾಡ: ‘ಈ ಹಿಂದೆ ಪತಿ ಏಣಗಿ ಬಾಳಪ್ಪ ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದಾಗ ಬಹಳ ಖುಷಿ ಪಟ್ಟಿದ್ದೆ. ಮುಂದೆ ಅದು ನನಗೂ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಖುಷಿಯಾಗಿದೆ. ಇದು ವೃತ್ತಿರಂಗಭೂಮಿಯ ಪ್ರತಿಯೊಬ್ಬ ಕಲಾವಿದೆಗೂ ಬಂದಿರುವ ಪ್ರಶಸ್ತಿ’ ಎಂದು ಲಕ್ಷ್ಮೀಬಾಯಿ ಏಣಗಿ ಪ್ರತಿಕ್ರಿಯಿಸಿದ್ದಾರೆ.
ವೃತ್ತಿ ರಂಗಭೂಮಿಗೆ ಶ್ರೀಮಂತಿಕೆ, ಘನತೆ ತಂದುಕೊಟ್ಟ ಗುಬ್ಬಿ ವೀರಣ್ಣ ಕಂಪನಿಯಲ್ಲಿ ಬಾಲ್ಯನಟಿಯಾಗಿದ್ದ ಲಕ್ಷ್ಮಿ, ಇಂದು 86ರ ವಯೋವೃದ್ಧೆ.
ಮೂಲತಃ ಬಳ್ಳಾರಿ ಜಿಲ್ಲೆಯವರಾದ ವಿರೂಪಾಕ್ಷಪ್ಪ, ಗುಬ್ಬಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಲ್ಲಿಂದಲೇ ಅವರ ಮಗಳು ಲಕ್ಷ್ಮಿ ಅವರಿಗೆ ರಂಗಭೂಮಿಯ ನಂಟು ಆರಂಭವಾಗಿದ್ದು. 7 ವರ್ಷದವರಿರುವಾಗಲೇ ಅಭಿನಯ ಪ್ರಾರಂಭಿಸಿದ ಅವರದು ವೃತ್ತಿ ರಂಗಭೂಮಿಯಲ್ಲಿ ಸುದಿೀರ್ಘ ಪಯಣ.
‘ಸ್ಕೂಲ್ ಮಾಸ್ಟರ್‘, ‘ಪಠಾಣಿ ಪಾಶಾ’, ‘ಜಗಜ್ಯೋತಿ ಬಸವಣ್ಣ’, ‘ಕಿತ್ತೂರ ಚನ್ನಮ್ಮ’ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಇಂದಿಗೂ ಬಾಳಪ್ಪನವರನ್ನು ‘ಬಸವಣ್ಣ’ ಪಾತ್ರದ ಮೂಲಕ ಗುರುತಿಸಿದರೆ, ಲಕ್ಷ್ಮಿಬಾಯಿ ಅವರ ‘ಕಿತ್ತೂರ ಚನ್ನಮ್ಮ’ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ.