ಶಿರಾ: ಲೈಂಗಿಕ ಕಿರುಕುಳ ನೀಡಿದ ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ವಿಷಯ ಬಹಿರಂಗ ಪಡಿಸದಂತೆ ತಮ್ಮ ಮಗಳಿಗೆ ಪ್ರಾಣ ಬೆದರಿಕೆ ಒಡ್ಡಿದ್ದರು. ಈಗಲೂ ಆತನ ಬೆಂಬಲಿಗರು ಜೀವ ಬೆದರಿಕೆಯೊಡ್ಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿನಿ ತಂದೆ ದೂರಿದ್ದಾರೆ.
‘ಪೊಲೀಸರಿಂದ ಪ್ರಕರಣ ವಾಪಸ್ ತೆಗೆದುಕೊಳ್ಳಬೇಕು. ಆಗ ನಾವು ನಿಮಗೆ ಕೇಳಿದಷ್ಟು ಹಣ ಕೊಡುತ್ತೇವೆ. ಇಲ್ಲದಿದ್ದರೆ ಎಲ್ಲಿಯಾದರೂ ಒಬ್ಬನೇ ಓಡಾಡುವುದು ಕಷ್ಟ ಎಂದು ಆರೋಪಿ ಪಾಂಡುರಂಗಯ್ಯ ಬೆಂಬಲಿಗರೊಬ್ಬರು ನೇರ ನನಗೆ ಪ್ರಾಣ ಬೆದರಿಕೆ ಹಾಕಿದರು’ ಎಂದು ವಿದ್ಯಾರ್ಥಿನಿ ತಂದೆ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆದರೆ ನನಗೆ ಹಣ ಬೇಡ. ನನ್ನ ಮಗಳಿಗೆ ನ್ಯಾಯ ಬೇಕು. ನನ್ನ ಒಂದು ಹೆಣ ಬೀಳಿಸಬಹುದಷ್ಟೇ. ಆದರೆ ನನ್ನ ಮಗಳಾದರೂ ಬದುಕಿದ್ದು ನ್ಯಾಯ ಪಡೆಯುತ್ತಾಳೆ’ ಎಂದು ಹೇಳಿದ್ದಾಗಿ ಅವರು ಹೇಳಿದರು.
‘ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ ದಿನವೇ ಪ್ರಾಂಶುಪಾಲರು ತಮ್ಮ ಮಗಳಿಗೆ ಈ ವಿಷಯ ನಿಮ್ಮ ತಂದೆ-–ತಾಯಿ ಅಥವಾ ಬೇರೆ ಯಾರಿಗೆ ಹೇಳಿದರೂ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಸಾಯಿಸಿ ಬುಕ್ಕಾಪಟ್ಟಣದ ಅರಣ್ಯ ಪ್ರದೇಶಕ್ಕೆ ಎಸೆದು ಬರುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಆ ವಿಷಯವನ್ನು ಈಗಾಗಲೇ ಪೊಲೀಸರು ಹಾಗೂ ನ್ಯಾಯಾಲಯಕ್ಕೆ ತಿಳಿಸಿದ್ದೇವೆ’ ಎಂದು ಅವರು ಹೇಳಿದರು.
ನಿಲ್ಲದ ವದಂತಿ: ಪ್ರಕರಣ ಬೆಳಕಿಗೆ ಬಂದ ಕೂಡಲೇ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಆರೋಪಿ ಪ್ರಾಂಶುಪಾಲ ಬಿ.ಪಿ.ಪಾಂಡರಂಗಯ್ಯ ಅಡಗು ತಾಣಗಳ ಬಗ್ಗೆ ತಾಲ್ಲೂಕಿನಲ್ಲಿ ಮತ್ತಷ್ಟು ವದಂತಿಗಳು ಹರಿದಾಡುತ್ತಿದ್ದು, ಈಗಾಗಲೇ ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್ ಮನೆ ತೊರೆದು ಆಂಧ್ರದ ಹಿಂದೂಪುರದಲ್ಲಿ ಅಡಗಿದ್ದಾರೆ ಎಂಬ ವದಂತಿ ಕೇಳಿಬಂದಿವೆ.
ಆದರೆ ಈವರೆಗೂ ಆರೋಪಿ ಬಂಧಿಸದ ಪೊಲೀಸರು ಪ್ರಭಾವಿ ವ್ಯಕ್ತಿಗಳ ಮರ್ಜಿಗೆ ಒಳಗಾಗಿ ನ್ಯಾಯಾಲಯದಿಂದ ಜಾಮೀನು ಪಡೆಯಲಿ ಎಂದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.