ಹಾವೇರಿ: ‘ಇಂದಿನ ವಿಜ್ಞಾನಿಗಳು ಹುಡುಕುತ್ತಿರುವ ಬದುಕಿನ ಮೌಲ್ಯಗಳನ್ನು ಐದು ಸಾವಿರದ ವರ್ಷಗಳ ಹಿಂದೆಯೇ ನಮ್ಮ ಜನಪದರು ಕಂಡುಕೊಂಡಿದ್ದರಲ್ಲದೇ, ಮೌಖಿಕ ಪರಂಪರೆ ಮೂಲಕ ಸಾಗಿಬಂದರೂ ತನ್ನಲ್ಲಿಯ ಮೌಲಿಕ ಗುಟ್ಟನ್ನು ಬಿಟ್ಟುಕೊಡದಿರುವುದು ಜನಪದರ ಹೆಗ್ಗಳಿಕೆಯಾಗಿದೆ’ ಎಂದು ನಾಡೋಜ ದೇ. ಜವರೇಗೌಡ ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ಕೋರ್ಸ ಶಿಕ್ಷಣ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇದದ ಅರ್ಧ ಭಾಗ ಜನಪದವೇ ಆಗಿದ್ದು, ಅದರಲ್ಲಿರುವ ಮೌಲಿಕ ಗುಟ್ಟಗಳನ್ನು ಅರಿಯಲು ಜಾನಪದ ಸಾಹಿತ್ಯದ ಆಳವಾದ ಅಧ್ಯಯನ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯವು ಪದವಿ ಕಾಲೇಜುಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸುತ್ತಿರುವ ಉತ್ತಮ ಬೆಳವಣಿಗೆಯಾಗಿದೆ ಎಂದರು.
ಜಾನಪದ ವಿವಿ ಕುಲಸಚಿವ ಡಾ.ಡಿ.ಬಿ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಟಿಫಿಕೇಟ್ ಕೋರ್ಸ ಶಿಕ್ಷಣ ಅಧ್ಯಯನದ ಗುರಿ ಉದ್ದೇಶಗಳನ್ನು ತಿಳಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ವಹಿಸಿದ್ದರು. ಡಾ.ನೀಲಗಿರಿ ತಳವಾರ, ಡಾ. ಸಿ. ನಾಗಣ್ಣ, ಡಾ.ಸಿ.ಮಲ್ಲಣ್ಣ ಉಪಸ್ಥಿತರಿದ್ದರು.
ವರ್ಷಾ ಪಾಟೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ಬಿ.ಸಿ.ಬನ್ನೂರ ಸರ್ವರನ್ನು ಸ್ವಾಗತಿಸಿದರು. ಸಂಯೋಜನಾಧಿಕಾರಿ ಪ್ರೊ.ಎನ್.ಕೆಂಚವೀರಪ್ಪ ನಿರೂಪಿಸಿದರು. ಡಾ.ಜಗದೀಶ ಹೊಸಮನಿ ವಂದಿಸಿದರು.
‘ಜಾನಪದ ವಿವಿಗೆ ಸರ್ಕಾರದ ನೆರವು ಅಗತ್ಯ’
ಶಿಗ್ಗಾವಿ: ‘ಜಗತ್ತಿನಲ್ಲಿ ಎಲ್ಲಕ್ಕೂ ಮೂಲ ಜ್ಞಾನವಾಗಿರುವ ಜಾನಪದವನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ನೆರವು ಮತ್ತು ಸಹಕಾರ ನೀಡುವುದು ಅವಶ್ಯವಾಗಿದೆ’ ಎಂದು ನಾಡೋಜ ಡಾ. ದೇ. ಜವರೇಗೌಡ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಸೋಮವಾರ ನಡೆದ ’ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಆಚಾರ- ವಿಚಾರ, ನಂಬಿಕೆ, ರೂಢಿ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಜಾನಪದ ವಿಶ್ವವಿದ್ಯಾಲಯವು ಬೃಹತ್ ವಸ್ತು ಸಂಗ್ರಹಾಲಯ ನಿರ್ಮಾಣ, ಗ್ರಾಮ ಚರಿತ್ರೆ ಕೋಶ, ಭಾರತೀಯ ಕೃಷಿ ವಿಜ್ಞಾನ ಕೋಶ, ಬುಡಕಟ್ಟು ಭಾಷಾಂತರ ಯೋಜನೆ ಇತ್ಯಾದಿ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಪ್ರಶಂಶನೀಯ’ ಎಂದರು.
‘ಜಾನಪದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತಿರುವ ವಿಶ್ವವಿದ್ಯಾಲಯಕ್ಕೆ ಸರ್ಕಾರ, ಜನಪ್ರತಿನಿಧಿಗಳು ಅಗತ್ಯ ನೆರವು ನೀಡಲು ಮುಂದಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, ‘ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜುಗಳಲ್ಲಿ ಜಾನಪದ ವಿಷಯವನ್ನು ಪಠ್ಯದಲ್ಲಿ ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಿರಿಯ ವಿದ್ವಾಂಸ ಪ್ರೊ. ದೇ.ಜವರೇಗೌಡ ಅವರು ಸೂಚಿಸಿದ ಎಲ್ಲ ಸಲಹೆ ಮಾರ್ಗದರ್ಶನಗಳನ್ನು ಗೌರವದಿಂದ ಸ್ವೀಕರಿಸಿ, ವಿಶ್ವವಿದ್ಯಾಲಯವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಯ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರೊ. ದೇ. ಜವರೇಗೌಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಡಾ.ಪ್ರಧಾನ ಗುರುದತ್ತ, ವಿದ್ವಾಂಸರಾದ ಡಾ. ಸಿ. ನಾಗಣ್ಣ, ಡಾ.ಎನ್.ಎಂ.ತಳವಾರ, ಡಾ.ಕೆ.ಕೆಂಪೇಗೌಡ, ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ, ಎಂ.ಬಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಚಂದ್ರ ಪೂಜಾರಿ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
ಅತಿಥಿ ಅಧ್ಯಾಪಕಿ ಸಾವಕ್ಕ ಪ್ರಾರ್ಥಿಸಿದರು. ಕುಲಸಚಿವ ಪ್ರೊ.ಡಿ.ಬಿ. ನಾಯಕ ಸ್ವಾಗತಿಸಿದರು. ಕುಲಪತಿ ಅವರ ಆಪ್ತಕಾರ್ಯದರ್ಶಿ ಡಾ.ಬಸಪ್ಪ ಬಂಗಾರಿ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.