ರಾಯಚೂರು: ಇಲ್ಲಿಗೆ ಸಮೀಪದ ಮನ್ಸಲಾಪುರ –ಶಕ್ತಿನಗರ ನಡುವಿನ ಬೈಪಾಸ್ ರಸ್ತೆಯಲ್ಲಿ ಮಹೀಂದ್ರಾ ಕಂಟೇನರ್ ವಾಹನದಲ್ಲಿ 1,18,320 ರೂಪಾಯಿ ಮೊತ್ತದ ಸ್ಪೋಟಕ ವಸ್ತುಗಳು ಹಾಗೂ ಅಮೋನಿಯಂ ನೈಟ್ರೇಟ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನದ ಹಿಂದೆ ಈ ದಾಳಿ ನಡೆಸಲಾಗಿದೆ. ರಾತ್ರಿ ಹೊತ್ತು ಬೈಪಾಸ್ ರಸ್ತೆಯಲ್ಲಿ ಮಹೀಂದ್ರಾ ಕಂಟೇನರ್ ವಾಹನ ನಿಂತಿದ್ದನ್ನು ಕಂಡ ಪೊಲೀಸರು ವಿಚಾರಣೆ ನಡೆಸಿದಾಗ ಆ ವಾಹನದಲ್ಲಿ ಸ್ಪೋಟಕ ಸಾಗಿಸುತ್ತಿದ್ದುದು ಗೊತ್ತಾಗಿದೆ ಎಂದು ಹೇಳಿದರು.
ರಾಜಸ್ತಾನ್ದ ಪಟಿಯಾಂಕ ಗ್ರಾಮದ ಸರವಣ್ ಎಂಬ ಚಾಲಕ ಈ ವಾಹನದಲ್ಲಿ ಸ್ಪೋಟಕ ಸಾಗಿಸುತ್ತಿದ್ದ. ವಾಹನದಲ್ಲಿ 500 ಕೆ.ಜಿ ಅಮೋನಿಯಂ ನೈಟ್ರೇಟ್, 25 ಬಾಕ್ಸ್ನಲ್ಲಿ 500 ಜಿಲಿಟಿನ್ ಕಡ್ಡಿಗಳು, 5 ರಟ್ಟಿನ ಬಾಕ್ಸ್ನಲ್ಲಿ 73 ಸಾವಿರ ಬೆಲೆಬಾಳುವ ಡಿಟೋನೆಟರ್ಸ್ ಸಾಗಿಸಲಾಗುತ್ತಿದ್ದುದು ತಪಾಸಣೆ ಸಂದಭರ್ದಲ್ಲಿ ಗೊತ್ತಾಗಿದ್ದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಸಿಂದಗಿಯ ಕೃಷ್ಣ ಗೋಪಾಲ್ ಮುಂದ್ರಾ, ಲಕ್ಷ್ಮಣ ಅಶೋಕ ಬೆರವಾಡಗಿ, ರಾಜು ಮುಂದ್ರಾ ಅವರು ಈ ವಸ್ತುಗಳನ್ನು ತನಗೆ ಈ ವಸ್ತು ಕೊಟ್ಟು ರಾಯಚೂರು ಹತ್ತಿರದ ಮಿಟ್ಟಿ ಮಲ್ಕಾಪುರ ಗ್ರಾಮದ ಈಶ್ವರರೆಡ್ಡಿ ಎಂಬುವವರಿಗೆ ತಲುಪಿಸಲು ಕಳುಹಿಸಿದ್ದಾಗಿ ಚಾಲಕ ಸರವಣ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಪೊಲೀಸ್ ಅಧೀಕ್ಷಕರ ಕಚೇರಿಯ ಇನ್ಸಪೆಕ್ಟರ್ ಜೆ ಕರುಣೇಶಗೌಡ, ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಎಚ್.ಬಿ ಸಣ್ಣಮನಿ, ಸಿಬ್ಬಂದಿ ಶೇಖ ಅಬ್ದುಲ್, ಶೇಖರ್, ಹನುಮಂತರಾಯ, ನಾಗರಾಜ್ ಅವರು ಈ ದಾಳಿ ನಡೆಸಿದ್ದಾರೆ. ಗ್ರಾಮೀಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಮೇಶ ಮೇಟಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.