ಯಾದಗಿರಿ: ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಜನತೆ ಮರೆಯುವಂತಿಲ್ಲ’ ಎಂದು ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಹೇಳಿದರು.
ಬುಧವಾರ ನಗರದ ಕೆಜೆಪಿ ಕಚೇರಿಯಲ್ಲಿ ನಡೆದ ಯಾದಗಿರಿ ಹಾಗೂ ಗುರುಮಠಕಲ್ ಮತಕ್ಷೇತ್ರದ ಕೆಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಡಿಯೂರಪ್ಪನವರ ಇಚ್ಛಾಶಕ್ತಿಯಿಂದಲೇ ಯಾದಗಿರಿ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲದೇ ತಕ್ಕ ಮಟ್ಟಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು ಎಂದರು.
ರಾಜ್ಯ ಹಾಗೂ ದೇಶದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಮ್ಮ ನಾಯಕ ಯಡಿಯೂರಪ್ಪನವರು, ಬಿಜೆಪಿ ಸೇರ್ಪಡೆಗೆ ನಿರ್ಧಾರ ಕೈಗೊಂಡಿದ್ದಾರೆ. ಉಭಯ ಮತಕ್ಷೇತ್ರದ ಕಾರ್ಯಕರ್ತರ ಗೌರವ ಹಾಗೂ ಅಭಿಪ್ರಾಯಗಳನ್ನು ಮೊದಲಿನಿಂದಲೂ ಮುದ್ನಾಳ ಸಹೋದರರು ಗೌರವಿಸುತ್ತ ಬಂದಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ ನಾಯಕರಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸ್ಥಾಪಿಸಿದರು. ಇದರ ಪರಿಣಾಮ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮತಗಳ ವಿಭಜನೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ನಂತರ ದಿನಗಳಲ್ಲಿ ಕಾಂಗ್ರೆಸ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ನಡೆಸಿದ ಹಲವಾರು ಭ್ರಷ್ಟಾಚಾರ ಹಗರಣಗಳಿಂದ ಜನತೆ ತತ್ತರಿಸಿ ಬದಲಾವಣೆಗಾಗಿ ಬಿಜೆಪಿಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕೆಜೆಪಿ ಮುಖಂಡ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ‘ಅಧಿಕಾರ ಇರಲಿ ಬಿಡಲಿ, ನಾವು ಎರಡೂ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಜನರ ಸಮಸ್ಯೆಗಳಿಗೆ ಮೊದಲಿನಿಂದಲೂ ಪ್ರಾಮಾಣಿಕವಾಗಿ ಹೋರಾಟ ಮಾಡುವ ಮೂಲಕ ಪರಿಹಾರ ದೊರಕಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.
ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಸಿದ್ದಣಗೌಡ ಕಾಡಂನೋರ್ ಮಾತನಾಡಿದರು. ಉಭಯ ಮತಕ್ಷೇತ್ರದ ಕಾರ್ಯಕರ್ತರು ಮಾತನಾಡಿ, ಬಿಜೆಪಿ ಪಕ್ಷ ಸೇರ್ಪಡೆಯಾಗುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಾಮರಡ್ಡಿಗೌಡ ಕ್ಯಾಸಪನಳ್ಳಿ, ಉಮಾರಡ್ಡಿ ನಾಯ್ಕಲ್, ರಾಮಲಿಂಗಪ್ಪ ಯರಗೋಳ, ವೆಂಕಟರಾಮರಡ್ಡಿ ವಡವಟ್, ಬಸವರಾಜಪ್ಪಗೌಡ ಕ್ಯಾತನಾಳ, ಭೀಮರಾಯ ಬದ್ದೇಪಲ್ಲಿ, ನಗರಸಭೆ ಸದಸ್ಯ ಸುರೇಶ ಕೋಟಿಮನಿ, ನಾಗರಾಜ ಬೀರನೂರ, ಶರಣಗೌಡ ಬಾಡಿಯಾಳ ಸೇರಿದಂತೆ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.