ಬೆಂಗಳೂರು: ‘ಬುದ್ಧನನ್ನು ವಿಷ್ಣುವಿನ ಅವತಾರ ಎನ್ನುವ ಮೂಲಕ ದೇವರ ಮಟ್ಟಕ್ಕೆ ಎತ್ತರಿಸಿದ ಭಾರತೀಯರೇ ಬೌದ್ಧಮತವನ್ನು ದೇಶದಿಂದ ಗುಳೆ ಹೊರಡುವಂತೆ ಮಾಡಿದರು’ ಎಂದು ಭಾರತದ ಮಾಜಿ ರಾಯಭಾರಿ ಪಾಸ್ಕಲ್ ಅಲೆನ್ ನಜರತ್ ಅಭಿಪ್ರಾಯಪಟ್ಟರು.
ಲೋಟಸ್ ಅಂಡ್ ಕ್ರಿಸಂಥಮಂ ಟ್ರಸ್ಟ್ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಜಪಾನ್ನಲ್ಲಿ ಬೌದ್ಧಮತದ ಆಗಮನ, ವಿಕಸನ ಹಾಗೂ ಬೆಳವಣಿಗೆ’ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
‘ಸಂಗೀತ, ಕಲೆ, ಸಂಸ್ಕೃತಿ, ಜ್ಞಾನ, ತತ್ತ್ವಜ್ಞಾನ, ಧ್ಯಾನ.. ಹೀಗೆ ಒಂದು ಪ್ಯಾಕೇಜ್ ರೂಪದಲ್ಲಿದ್ದ ಬೌದ್ಧ ಮತ ಚೀನಾ, ಜಪಾನ್ ಕೊರಿಯಾ ಮೊದಲಾದ ದೇಶಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಪರದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಧರ್ಮ ತವರಿನಲ್ಲೇ ನೆಲೆ ಕಳೆದುಕೊಂಡಿತು’ ಎಂದರು
.
‘ಜಪಾನ್ನ ಪ್ರತಿಯೊಂದು ಊರಿನಲ್ಲೂ ಬೌದ್ಧ ದೇವಾಲಯಗಳಿದ್ದು, ಅವುಗಳ ಮೂಲಕ ಬೌದ್ಧ ಸಂಸ್ಕೃತಿ ಇಡೀ ದೇಶದ ತುಂಬಾ ಪಸರಿಸಿತು. ಅಲ್ಲಿ ದೊರೆತ ರಾಜಾಶ್ರಯವೂ ಇದಕ್ಕೆ ಕಾರಣವಾಯಿತು. ಶಾಲೆಗಳಲ್ಲಿ ಕಲಿಸುವ ಪಾಠದಲ್ಲಿ, ದೇವಾಲಯಗಳಲ್ಲಿ ಮಾಡುವ ಧ್ಯಾನದಲ್ಲಿ, ಕೊನೆಗೆ ಸಮರ ಕಲೆಗಳಲ್ಲೂ ಬೌದ್ಧ ಸಂಸ್ಕೃತಿ ಅನುರಣಿಸಿತು’ ಎಂದು ವಿವರಿಸಿದರು.
‘ಬೌದ್ಧ ಮತ ಸ್ಥಾಪನೆಯಾಗುವ ಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಚೀನಾದಿಂದ ಯುರೋಪ್ವರೆಗೆ ಹರಡಿದ್ದ ರೇಷ್ಮೆ ಮಾರ್ಗ (ರೇಷ್ಮೆಯನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರಫ್ತು ಮಾಡಲು ಬಳಸುತ್ತಿದ್ದ ದಾರಿ) ಬೌದ್ಧ ಮತ ಪ್ರಸಾರಕ್ಕೂ ಸಂಪರ್ಕ ಜಾಲವನ್ನು ಒದಗಿಸಿತು’ ಎಂದರು.
ಲೋಟಸ್ ಅಂಡ್ ಕ್ರಿಸಂಥಮಂ ಟ್ರಸ್ಟ್ನ ಜೀಜಾ ಹರಿಸಿಂಗ್ ಮತ್ತು ಸಂತೋಷ ನೆಡುಂಗಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.