ಮಂಗಳೂರು: ‘ಭರತನಾಟ್ಯ ಕ್ಷೇತ್ರದಲ್ಲಿ ಶಾಸ್ತ್ರೀಯ ಪರಂಪರೆಯ ಹೊರಗೆ ಕಾಲಿಡಬೇಡಿ, ಅದೇ ರೀತಿ ಹಳೆಯ ಪರಿಕಲ್ಪನೆಗೇ ಜೋತು ಬೀಳುವ ಕೆಲಸವನ್ನೂ ಮಾಡಬೇಡಿ. ಈ ಬಂಧದೊಳಗೆ ಭರತನಾಟ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ’ ಎಂದು ತಮ್ಮ ಶಿಷ್ಯ ಪರಂಪರೆಗೆ ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್ ಕಿವಿಮಾತು ಹೇಳಿದರು.
ಉಳ್ಳಾಲ ಮೋಹನ ಕುಮಾರ್ 80 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಶುಕ್ರವಾರ ಪುರಭವನದಲ್ಲಿ ನಡೆದ ‘ಮೋಹನಾಭಿವಂದನಂ’ ಕಾರ್ಯಕ್ರಮದಲ್ಲಿ ಅವರ ಶಿಷ್ಯಂದಿರು ಸೇರಿ ಸಮರ್ಪಿಸಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ನಾನು ಈಗಲೂ ಕಲೆಯ ವಿದ್ಯಾರ್ಥಿ.
ನೃತ್ಯ ಪರಂಪರೆ ಉಳಿಯಬೇಕು ಎನ್ನುವ ಆಶಯದಿಂದ ನಾನು ವಿದ್ಯಾರ್ಥಿಗಳೊಡನೆ ನಿಷ್ಠುರವಾಗಿ ನಡೆದುಕೊಂಡಿದ್ದೇನೆ. ಅದನ್ನು ಸಕಾರಾತ್ಮಕ ಧೋರಣೆಯಿಂದ ಸ್ವೀಕರಿಸಿ ನೃತ್ಯಪರಂಪರೆಯನ್ನು ಮುಂದುವರಿಸುತ್ತಾ ಇದ್ದಾರೆ. ಅದನ್ನೆಲ್ಲಾ ನೋಡುವ ಭಾಗ್ಯ ನನ್ನದಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹೇಳಿದರು.
‘ಬೇಡರ ನೃತ್ಯ, ನವಿಲು ನೃತ್ಯಗಳನ್ನೇ ಶಾಸ್ತ್ರೀಯ ನೃತ್ಯ ಎಂದು ಪರಿಗಣಿಸುತ್ತಿದ್ದ ಕಾಲದಲ್ಲಿ ವೈಜಯಂತಿ ಮಾಲಾರಂತಹವರು ಶಾಸ್ತ್ರೀಯ ನೃತ್ಯ ಮಾಡುವುದನ್ನು ನೋಡಿ ಬೆರಗಾಗಿದ್ದೆವು. ನನ್ನ ಸಹಪಾಠಿ ಪ್ರೇಮ್ನಾಥ್ ಮಾಷ್ಟ್ರು, ಮುರಳೀಧರ್ ಮತ್ತು ನಾನು ತಮಿಳುನಾಡಿನ ರಾಜರತ್ನಪಿಳ್ಳೈ ಅವರ ಬಳಿ ಹೋಗಿ ಶಾಸ್ತ್ರೀಯ ನೃತ್ಯವನ್ನು ಕಲಿತೆವು. ಯಕ್ಷಗಾನ ಬಹು ಜನಪ್ರಿಯವಾಗಿರುವ ಈ ಪ್ರದೇಶದಲ್ಲಿ ಭರತನಾಟ್ಯವನ್ನು ಜನಪ್ರಿಯಗೊಳಿಸುವುದು ಸುಲಭವಾಗಿರಲಿಲ್ಲ.
ಆದರೂ ಅದನ್ನೆಲ್ಲ ಮೀರಿ ಇಂದು ಪಂದನಲ್ಲೂರು ಶೈಲಿಯ ಭರತನಾಟ್ಯಂ ಕರಾವಳಿ ಪ್ರದೇಶದಲ್ಲಿ ಜನಪ್ರಿಯವಾಗಿರುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ’ ಎಂದು ಹೇಳಿದ ಅವರು ಜೀವನದಲ್ಲಿ ಈ ಸಾಧನೆ ಮಾಡಲು ಹೆಗಲಿಗೆ ಹೆಗಲು ಕೊಟ್ಟು ದುಡಿದ ಪತ್ನಿ ಸಬಿತಾ ಅವರನ್ನು ಅಭಿನಂದಿಸುತ್ತಾ ಗದ್ಗದಿತರಾದರು.
ಸುಮಾರು 30ಕ್ಕೂ ಹೆಚ್ಚು ಶಿಷ್ಯವರ್ಗದವರು ಒಟ್ಟಾಗಿ ಮೋಹನ ಕುಮಾರ್ ಅವರನ್ನು ಅಭಿನಂದಿಸಿದರು. ಶಾಲು ಹೊದೆಸಿ ಪೇಟತೊಡಿಸಿ, ಬೆಳ್ಳಿ ಬಟ್ಟಲು ಮತ್ತು ಲೋಟ ಹಾಗೂ ಅವರ ಪ್ರೀತಿಯ ಜುಬ್ಬಾ ಪೈಜಾಮಾವನ್ನು ನೀಡಿ ಗೌರವಿಸಲಾಯಿತು. ಮುತ್ತೈದೆಯರು ಮೋಹನ ಕುಮಾರ್ ಮತ್ತು ಸಬಿತಾ ದಂಪತಿಯನ್ನು ಆರತಿ ಬೆಳಗಿ ವಂದಿಸಿದರು.
ಅಭಿನಂದನಾ ಭಾಷಣ ಮಾಡಿದ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್, ಶುದ್ಧ ಶಾಸ್ತ್ರೀಯ ಕಲಿಕೆಗೆ ಉಳ್ಳಾಲ ಮೋಹನ ಕುಮಾರ್ ಆದ್ಯತೆ ನೀಡಿದ್ದಾರೆ. ಆ ಮೂಲಕ ಕರಾವಳಿಯಲ್ಲಿ ಪಂದನಲ್ಲೂರು ಶೈಲಿಯನ್ನು ಜನಪ್ರಿಯಗೊಳಿಸಿದ್ದಾರೆ. ಶಿಷ್ಯಂದಿರನ್ನು ತಮ್ಮ ಮಕ್ಕಳ ಹಾಗೆ ಪರಿಗಣಿಸಿ ಪಾಠ ಮಾಡಿರುವುದರಿಂದ ಇಂದು ಅಪಾರವಾದ ಶಿಷ್ಯವರ್ಗದಿಂದ ಅಭಿನಂದನೆ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು.
ಡಾ. ಬಿ. ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್, ಶಾಸಕ ಗಣೇಶ್ ಕಾರ್ಣಿಕ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ನೃತ್ಯಗುರು ಪ್ರೊ. ಎಂ. ಆರ್. ಕೃಷ್ಣಮೂರ್ತಿ ಮತ್ತು ಮುರಳೀಧರ್ ರಾವ್, ಜಯಲಕ್ಷ್ಮಿ ಆಳ್ವ, ಸಹಪಾಠಿ ಪ್ರೇಮ್ನಾಥ್ ಮಾಷ್ಟ್ರು, ಕುದ್ಕಾಡಿ ವಿಶ್ವನಾಥ ರೈ ಮತ್ತಿತರರು ಉಳ್ಳಾಲ ಮೋಹನ ಕುಮಾರ್ ಅವರನ್ನು ಅಭಿನಂದಿಸಿದರು.
ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಬ್ರಿಟನ್, ಅಮೆರಿಕ, ದುಬೈ, ಬೆಂಗಳೂರು, ಗೋವಾ, ಮುಂಬೈ ಮುಂತಾದ ಕಡೆಗಳಿಂದ ಶಿಷ್ಯಂದಿರು ಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.