ನಾಯಕನಹಟ್ಟಿ: ಪಹಣಿ ಹೊಂದಿರುವ ಅಳತೆ ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಮರು ಭೂ ಮಾಪನಾ ಕಾರ್ಯವನ್ನು ಸರ್ಕಾರದ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.
ಸಮೀಪದ ಕಾರ್ತೀಕೇನಹಟ್ಟಿಯಲ್ಲಿ ಸೋಮವಾರ ನಡೆದ ಮರು ಭೂ ಮಾಪನ ಕುರಿತ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಕಚೇರಿ ಕಡತಗಳಲ್ಲಿ ಭೂ ದಾಖಲೆ ಶಿಥಿಲವಾಗಿರುವುದರಿಂದ ಅಗತ್ಯವಿರುವ ರೈತರಿಗೆ ದಾಖಲೆ ಬೇಕಾದಲ್ಲಿ ಕಷ್ಟವಾಗುತ್ತಿದೆ. ಗಣಕೀಕೃತ ದಾಖಲೆಗಾಗಿ ಸರ್ಕಾರವೇ ಮರು ಭೂ ಮಾಪನಾ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು.
ಕಾರ್ತೀಕೇನಹಟ್ಟಿ ಗ್ರಾಮಕ್ಕೊಳಪಡುವ 950 ಎಕರೆ ಜಮೀನಿನಲ್ಲಿ 42 ಸರ್ವೇ ನಂಬರ್ಗಳಿವೆ. ಅವುಗಳಲ್ಲಿ ಸರ್ಕಾರಕ್ಕೆ ಸೇರಿದ 4 ಸರ್ವೇ ನಂಬರ್ ಗಳಿದ್ದು, ರೈತರ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ಸರ್ವೇ ಕೈಗೊಳ್ಳ ಲಾಗುವುದು ಎಂದು ಅವರು ಭರವಸೆ ನೀಡಿದರು.
ತಹಶೀಲ್ದಾರ್ ವಿಜಯರಾಜು, ಭೂ ಮಾಪನ ಇಲಾಖೆಯ ಉಪ ನಿರ್ದೇಶಕ ರಾಮಾಂಜಿನೇಯ, ಕಂದಾಯ ನಿರೀಕ್ಷಕ ರಾಜಶೇಖರ್, ಭೀಮನ ಕೆರೆ ಶಿವಮೂರ್ತಿ, ರಮೇಶ್ ಬಾಬು, ಮಲ್ಲಯ್ಯ, ಹಾಜರಿದ್ದರು.