ಹಾವೇರಿ: ಮಳೆ ನೀರನ್ನು ಹರಿಬಿಡದೆ ತೋಟಗಳಲ್ಲಿ ಚಿಕ್ಕ ಬದುವುಗಳನ್ನು ನಿರ್ಮಿಸಿ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಭೂ ಸವಕಳಿ ತಡೆಗಟ್ಟಬಹುದು ಎಂದು ತಾಲ್ಲೂಕಿನ ಅಕ್ಕೂರ ಗ್ರಾಮದ ಪ್ರಗತಿಪರ ರೈತ ಪರಮೇಶ್ವರಯ್ಯ ಸಾಲಿಮಠ ತಿಳಿಸಿದರು.
ಬೆಂಗಳೂರನಲ್ಲಿ ಇತ್ತೀಚೆಗೆ ನಡದ ಅಂತರ್ರಾಷ್ಟ್ರೀಯ ಕೃಷಿ ಮೇಳದಲ್ಲಿ ‘ರೈತರಿಂದ ರೈತರಿಗಾಗಿ’ ಏರ್ಪಡಿಸಿದ್ದ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಳೆ ನೀರು ಕೊಯ್ಲು ಹಾಗೂ ಅಂತರ್ಜಲ ಮರುಪೂರಣ ಕ್ರಮಗಳ ಬಗ್ಗೆ ಮಾತನಾಡಿದ ಕುರಿತು ಅವರು ಅನುಭವ ಹಂಚಿಕೊಂಡರು.
ತಮ್ಮ ಜಮೀನಿನಲ್ಲಿ ಭೂ ಸವಕಳಿ ತಡೆಗಟ್ಟುವ ಕುರಿತು ಪ್ರಾಯೋಗ ಮಾಡಿದ್ದು, ಇದರಿಂದ ಅಂತರ್ಜಲ ಮಟ್ಟ ಸುಧಾರಿಸುವ ಜತೆಗೆ ಬೆಳೆಗಳಿಗೆ ಸಮರ್ಪಕ ನೀರು ದೊರೆತು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದರು.
ಅನಾವಶ್ಯಕ ಹಳ್ಳವನ್ನು ಸೇರುತ್ತಿದ್ದ ಮಳೆ ನೀರನ್ನು ಚರಂಡಿಗಳ ಮೂಲಕ ಕೃಷಿ ಹೊಂಡಕ್ಕೆ ಚರಂಡಿಗಳ ಹರಿಯುವಂತೆ ಮಾಡಿದೆ. ಈ ಕ್ರಮದಿಂದ ಕೃಷಿ ಹೊಂಡ ತುಂಬಿತಲ್ಲದೇ, ವರ್ಷವಿಡಿ ಜಮೀನು ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಕೊಳವೆ ಬಾವಿಯಲ್ಲಿ ನೀರಿನ ಮಟ್ಟವು ಕೂಡ ಹೆಚ್ಚಾಗಿದೆ ಎಂದರು.
ರಾಜ್ಯ ಕೃಷಿ ಆಯೋಗದ ಅಧ್ಯಕ್ಷ ಡಾ.ಎಸ್.ಎ.ಪಾಟೀಲ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿಯ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಸರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು ಎಂದು ತಿಳಿಸಿದರು.