ದೇವನಹಳ್ಳಿ: ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ಹೊಸ ರೂಪ ನೀಡುವ ಮೂಲಕ ಭೂಮಿ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿರುವುದು ಭೂ ಸ್ವಾಧೀನಕ್ಕೆ ಒಳಪಡುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯವನ್ನು ತಾಲ್ಲೂಕು ಪ್ರಾಂತ ರೈತ ಸಂಘ ಅಧ್ಯಕ್ಷ ಎನ್.ವೀರಣ್ಣ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ಈ ಹಿಂದಿನ ಕಾಯ್ದೆಯ ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿತ್ತು. ಹಿಂದಿನ ಸರ್ಕಾರ ರೈತರ ಹಿತಕಾಯದೆ ನಿರ್ಲಕ್ಷ್ಯವಹಿಸಿತ್ತು. ಪ ರಿಣಾಮ ತುಂಡು ಭೂಮಿ ಹೊಂದಿದ ಅನೇಕರು ದಿವಾಳಿಯಾದರು. ಆದರೆ ಹೊಸ ಕಾಯ್ದೆ ಈ ಆತಂಕವನ್ನು ದೂರ ಮಾಡಿದೆ ಎಂದು ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಹನ್ನೆರಡು ಸಾವಿರ ಎಕರೆ ಭೂ ಸ್ವಾಧೀನಕ್ಕೆ ಒಳಪಡುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯಲ್ಲಿ ಉದ್ದೇಶಿತ ಹೊಸ ತಿದ್ದಪಡಿ ಹೊಂದಿದ ಕಾಯ್ದೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
‘ನಿರ್ಗತಿಕರಾಗುವುದು ತಪ್ಪಿದೆ’: ತಿದ್ದಪಡಿ ಹೊಂದಿದ ಭೂ ಮಸೂದೆ ಕಾಯ್ದೆ ಅಂಗೀಕಾರ ಐತಿಹಾಸಿಕ. ಗ್ರಾಮೀಣ ಕೃಷಿಕರು ಭೂ ಸ್ವಾಧಿನದ ತೆಕ್ಕೆಯಲ್ಲಿ ಸಿಲುಕಿ ಅಲ್ಪಸ್ವಲ್ಪ ಪರಿಹಾರ ಪಡೆದು ಅಂತಿಮವಾಗಿ ನಿರ್ಗತಿಕರಾಗುತ್ತಿದ್ದರು ಆದರೆ ಈ ಕಾಯ್ದೆಯಿಂದ ಬೇರೆಡೆ ಭೂಮಿ ಖರೀದಿಸಿ ಕೃಷಿ ಚಟುವಟಿಕೆ ತೊಡಗಿಸಿಕೊಳ್ಳಲು ಪರಿಹಾರದ ಹಣದ ಮೂಲಕ ಸಾಧ್ಯವಿದೆ. ತಾಲ್ಲೂಕಿನ 207ರ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಮತ್ತು ಹೊರವರ್ತುಲ ರಸ್ತೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೂ ಹೊಸ ಕಾಯ್ದೆಯ ನೀತಿಗಳು ಅನ್ವಯವಾಗಬೇಕು.
–ರೈತ ಗೋಪಾಲಸ್ವಾಮಿ, ಸಾವಕನಹಳ್ಳಿ
‘ರಾಜ್ಯಗಳಿಗೆ ಅವಕಾಶ ಸರಿಯಲ್ಲ’
ಕೇಂದ್ರ ಸರ್ಕಾರ ಭೂ ಸ್ವಾಧಿನ ಕಾಯ್ದೆಗೆ ಸಂಬಂಧಿಸಿದಂತೆ ತಿದ್ದುಪಡಿ ಹೊಂದಿದ ಹೊಸ ಮಸೂದೆ ಅಂಗಿಕರಿಸಿ ರುವುದೇನೊ ಸರಿ. ಆದರೆ ಈ ವಿಧೇಯಕವನ್ನೇ ಅಧರಿಸಿ ತಮ್ಮದೇ ಕಾಯ್ದೆ ರೂಪಿಸಿಕೊಳ್ಳುವ ಅವಕಾಶ ಆಯಾ ರಾಜ್ಯಗಳಿಗೆ ಅವಕಾಶ ನೀಡಿರುವ ಕ್ರಮ ಸೂಕ್ತವಲ್ಲ. ರಾಜ್ಯಗಳು ಕೂಡಾ ಕೇಂದ್ರದ ನೀತಿಯನ್ನೇ ಪಾಲಿಸಬೇಕು ಎಂದು ಕಡ್ಡಾಯ ಗೊಳಿಸಬೇಕಾಗಿತ್ತು. ಹೊಸ ಕಾಯ್ದೆ ಯಿಂದ ಭೂಸ್ವಾಧೀನ ಪ್ರಕರಣ ಗಳಲ್ಲಿ ಪ್ರತಿಭಟನೆ ಮತ್ತು ಕಾನೂನು ಹೋರಾಟಗಳು ಕಡಿಮೆ ಯಾಗುವ ನಿರೀಕ್ಷೆ ಇದೆ. ಅಲ್ಲದೆ ಭೂ ಮಾಫಿಯಾಗೂ ಕಡಿವಾಣ ಬೀಳಲಿದೆ. ಭೂ ಸ್ವಾಧೀನದಲ್ಲಿ ಲೋಪವಾದರೂ ಮಾಲಿಕ ಕಾನೂನು ಹೋರಾಟದ ಮೂಲಕ ನ್ಯಾಯಾ ಲಯದಲ್ಲಿ ಪ್ರಶ್ನಿಸುವ ಅವಕಾಶ ಕಲ್ಪಿಸಿರುವುದು ಸೂಕ್ತವಾಗಿದೆ.
–ದೊಡ್ಡರಂಗಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ,ಕರ್ನಾಟಕ ದಲಿತ ವೇದಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.