ಬೆಂಗಳೂರು: ‘ಮಕ್ಕಳಿಗೆ ಶೈಕ್ಷಣಿಕ ಜ್ಞಾನವನ್ನಷ್ಟೇ ನೀಡಿದರೆ ಸಾಲದು; ಅವರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಉತ್ತಮ ಜೀವನ ಮೌಲ್ಯಗಳನ್ನೂ ಹೇಳಿಕೊಡಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ರಿಜಿಸ್ಟ್ರಾರ್ ಡಾ.ಎನ್.ಮೋಹನ್ ದಾಸ್ ಅಭಿಪ್ರಾಯಪಟ್ಟರು.
ಐಐಎಸ್ಸಿ ಕೇಂದ್ರೀಯ ವಿದ್ಯಾಲಯದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವದ ಬೇರಾವುದೇ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನರಿದ್ದಾರೆ. ಈ ವಿಚಾರದಲ್ಲಿ ಮುಂದಿನ ಹಲವು ವರ್ಷಗಳ ಕಾಲ ಭಾರತವನ್ನು ಹಿಂದಿಕ್ಕಲು ಬೇರಾವುದೇ ದೇಶಗಳಿಗೆ ಸಾಧ್ಯವಾಗುವುದಿಲ್ಲ’ ಎಂದು ಅವರು ಹೇಳಿದರು.
ಪ್ರಾಂಶುಪಾಲ ಕೆ.ಎನ್.ಭಟ್ ಮಾತನಾಡಿ, ‘ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ’ ಎಂಧರು.
ಸ್ವಾಮಿ ವಿವೇಕಾನಂದರ ಜೀವನ ಸಾಧನೆ ನಿರೂಪಿಸುವ ನೃತ್ಯ ನಾಟಕ, ವಿಶಿಷ್ಟ ಶೈಲಿಯ ಟರ್ಕಿ ಮತ್ತು ಫ್ಯೂಷನ್ ನೃತ್ಯ, ವೃದ್ಧಾಪ್ಯದ ಕಷ್ಟಗಳನ್ನು ವಿವರಿಸುವ ಆಂಗ್ಲ ನಾಟಕ, ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳ ಪ್ರದರ್ಶನವು ನೋಡುಗರ ಕಣ್ಮನ ಸೆಳೆಯಿತು.