ಬೆಳಗಾವಿ: ‘ಉತ್ತಮ ಸಂಸ್ಕಾರ ಮನುಷ್ಯನನ್ನು ಮಹಾದೇವನನ್ನಾಗಿ ಮಾಡುತ್ತದೆ. ಸಂಸ್ಕಾರವಂತ ಶ್ರೇಷ್ಠ ಸಮಾಜವನ್ನು ನಿರ್ಮಾಣ ಮಾಡು ತ್ತಾನೆ. ಲಿಂಗರಾಜರು ಉತ್ತಮ ಸಂಸ್ಕಾರವನ್ನು ಹೊಂದಿದ್ದರ ಫಲವೇ ಸಮಾಜದ ಋಣ ವನ್ನು ಪೂರೈಸಿದರು’ ಎಂದು ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.
ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ 153ನೆಯ ಜಯಂತಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಿ ಉತ್ತಮವಾದ ಸಂಸ್ಕಾರವಿರುತ್ತದೆಯೋ ಅಲ್ಲಿ ನವ ಸಮಾಜ ನಿರ್ಮಾಣಗೊಳ್ಳುತ್ತದೆ. ನಮ್ಮ ಮಕ್ಕಳಿಗೆ ಅಂತಹ ಸಂಸ್ಕಾರದ ಅಗತ್ಯತೆ ಇದೆ. ವಸ್ತುವಿಗೆ ಸಂಸ್ಕಾರ ಸಿಕ್ಕಾಗ ಅದಕ್ಕೆ ಅರ್ಥ ಬರುತ್ತದೆ. ಸಂಸ್ಕಾರದ ಬಲದಿಂದಲೇ ಒಂದು ಬಂಡೆಗಲ್ಲು ನಾನಾ ರೂಪಗಳನ್ನು ಪಡೆಯುವಂತೆ ವ್ಯಕ್ತಿಯೂ ಕೂಡ ನಿರ್ಮಾಣಗೊಳ್ಳುವಂತಾಗಬೇಕು. ಹಸಿದು ಉಣ್ಣುವುದು ಪ್ರಕೃತಿಯಾದರೆ ಹಸಿದವರಿಗೆ ಉಣಿಸುವುದು ಸಂಸ್ಕೃತಿ ಯಾಗಿದೆ. ಲಿಂಗರಾಜರು ಇಂತಹ ಸಂಸ್ಕೃತಿಯ ಪ್ರತಿರೂಪವಾಗಿದ್ದರು ಎಂದರು.
ಸಭ್ಯತೆ, ಸಜ್ಜನಿಕೆಯಿಂದ ಬದುಕಿದ ಲಿಂಗರಾಜರು ತ್ಯಾಗವೀರ ಎನಿಸಿ ಕೊಂಡರು. ಬದುಕಿನುದ್ದಕ್ಕೂ ಎಷ್ಟೇ ತೊಂದರೆಗಳು ಬಂದರು ಅವುಗಳನ್ನು ಎದುರಿಸಿದರು. ತಮ್ಮ ಸರ್ವ ಸಂಪ ತ್ತನ್ನು ಸಮಾಜದ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮುಡಿಪಾಗಿಟ್ಟರು. ಲಿಂಗ ರಾಜರು ಅಂದು ಬೆಳೆಗಿಸಿದ ಜ್ಞಾನದೀಪ ಎಂದೂ ಆರದ ನಂದಾದೀಪವಾಯಿತು. ಅವರ ದಾನ ಎಂದೂ ಅಳಿಯದ ಮಹಾದಾನವಾಯಿತು ಎಂದರು.
ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿ, ಲಿಂಗರಾಜರು ಸಮಾಜಕ್ಕೆ ನೀಡಿದ ದಾನ ಚಿರಸ್ಮರಣೀಯವಾಗಿದೆ. ಅವರು ಮಾಡಿದ ಸಾಮಾಜಿಕ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಜೀವಂತ ವಾಗಿ ಉಳಿದಿವೆ. ಲಿಂಗರಾಜರು ಸ್ಥಾಪಿ ಸಿದ ನಿಧಿಯಿಂದ ಅನೇಕರು ಶೈಕ್ಷಣಿಕ ವಾಗಿ ಸಾಧನೆಗೈದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು.
ಲಿಂಗಾಯತ ಸಮಾಜ ಬೆಳೆಯುವಂತೆ ಮಾಡಿದರು. ಇದೆಲ್ಲವೂ ಸಾಧ್ಯವಾ ದದ್ದು ಲಿಂಗರಾಜರ ತ್ಯಾಗದಿಂದ ಎಂದರು.
ಜಯಂತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ವಿತರಿಸಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸಂಸದ ಡಾ. ಪ್ರಭಾಕರ ಕೋರೆ, ಡಾ. ಎಸ್.ಎಸ್.ಮಸಳಿ ಉಪಸ್ಥಿತರಿದ್ದರು. ಬಸವರಾಜ ತಟವಟಿ ಸ್ವಾಗತಿಸಿದರು. ಡಾ. ಕೆ.ಆರ್.ಸಿದ್ಧಗಂಗಮ್ಮ ವಂದಿಸಿ ದರು. ಡಾ. ಮಹೇಶ ಗುರನಗೌಡರ ಹಾಗೂ ಡಾ. ಗುರುದೇವಿ ಹುಲೆಪ್ಪ ನವರ ಮಠ ನಿರೂಪಿಸಿದರು.
ಫಿಸಿಯೊಥೆರಪಿ ಸಂಸ್ಥೆ: ಕೆಎಲ್ಇ ಸಂಸ್ಥೆಯ ಫಿಸಿಯೊಥೆರಪಿ ಸಂಸ್ಥೆಯಲ್ಲಿ ನಡೆದ ಲಿಂಗರಾಜರ ಜಯಂತಿ ಕಾರ್ಯ ಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ ಮಾತನಾಡಿದರು. ಡಾ. ಸಂಜೀವ ಕುಮಾರ, ಡಾ.ಜೇಭಾ ಚಿತ್ರಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.