ಹುಬ್ಬಳ್ಳಿ: ‘ಮಹಾದಾಯಿ ನದಿ ನೀರು ಬಳಕೆ ಸಂಬಂಧ ಮಧ್ಯಂತರ ಆದೇಶ ನೀಡುವಂತೆ ರಾಜ್ಯ ಸರ್ಕಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಮಹಾದಾಯಿ ನ್ಯಾಯಮಂಡಳಿ ಅಧ್ಯಕ್ಷ ಜೆ.ಎಂ. ಪಾಂಚಾಲ್ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನ್ಯಾಯಮಂಡಳಿ ವತಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ಮಹಾದಾಯಿ ನದಿ ತಿರುವು ಯೋಜನೆ ಅಡಿ 7.56 ಟಿಎಂಸಿ ನೀರು ಬಳಸಿಕೊಂಡು ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿಯನ್ನು ಮಧ್ಯಂತರ ಆದೇಶದ ಮೂಲಕ ನೀಡಬೇಕು’ ಎಂದು ಕಳಸಾ –ಬಂಡೂರಿ ನಾಲಾ, ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿಯ ಸದಸ್ಯರು ಸಲ್ಲಿಸಿದ ಮನವಿಗೆ ಈ ಪ್ರತಿಕ್ರಿಯೆ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಮುಖಂಡರು ನ್ಯಾಯಮಂಡಳಿಗೆ ಅಹವಾಲು ಸಲ್ಲಿಸಿದರು.
ಸರ್ಕಾರದ ಚಿಂತನೆ : ‘ಮಧ್ಯಂತರ ಆದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸುವ ಸಂಬಂಧ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ’ ಎಂದು ರಾಜ್ಯದ ಪರ ವಕೀಲ ಮೋಹನ ಕಾತರಕಿ ತಿಳಿಸಿದರು.
‘ಮಧ್ಯಂತರ ಆದೇಶಕ್ಕೆ ಅರ್ಜಿ ಸಲ್ಲಿಸುವ ಕುರಿತು ಕರ್ನಾಟಕವು ನ್ಯಾಯಮಂಡಳಿಯ ಮುಂದೆ ತನ್ನ ಹಕ್ಕನ್ನು ಈಗಾಗಲೇ ಕಾಯ್ದಿರಿಸಿದೆ ಎಂದು ಅವರು ಮಾಹಿತಿ ನೀಡಿದರು.