ಕೊಪ್ಪಳ: ಮನಸ್ಸಿನ ಹಲವು ಭಾವನೆಗಳನ್ನು ಸಕಾಲಕ್ಕೆ ಹೊರಗೆಡವಿ ಬರವಣಿಗೆ ರೂಪಕ್ಕೆ ಇಳಿಸುವುದೇ ಕವನ. ಮನಸು ಕವನವಾದರೆ, ಕವನ ಮನಸ್ಸಿನ ಮಾತಾಗುತ್ತದೆ ಎಂದು ಸಾಹಿತಿ ವಿ. ಹರಿನಾಥ ಬಾಬು ಅಭಿಪ್ರಾಯಪಟ್ಟರು.
ಭಾಗ್ಯನಗರದ ಮೈತ್ರಿ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಸಾಹಿತಿ ಅಕ್ಬರ್ ಕಾಲಿಮಿರ್ಚಿ ಅವರ ‘ರೈಲುಗಾಡಿ’ ಮತ್ತು ‘ಕತ್ತಲೆಯ ಪ್ರೀತಿಗೆ’ ಎಂಬ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕ ಅಕ್ಕಿ ಬಸವೇಶ, ಸಾಹಿತಿ ಅಬ್ಬಾಸ್ ಮೇಲಿನಮನಿ ಕೃತಿಗಳ ಕುರಿತು ಮಾತನಾಡಿದರು. ಕವನ ಸಂಕಲನಕಾರ ಅಕ್ಬರ್ ಕಾಲಿಮಿರ್ಚಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಚ್.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಚಂದ್ರಶೇಖರ್, ವೀರಪ್ಪ ನಿಂಗೋಜಿ, ಜಾಜಿ ದೇವೇಂದ್ರಪ್ಪ, ಎ.ಎಸ್. ಮಕಾನದಾರ್, ಶಂಕರ ಹೂಗಾರ, ಆರ್.ಎಸ್. ಸರಗಣಾಚಾರಿ, ಉಪನ್ಯಾಸಕ ಶಿವಾನಂದ ಮೇಟಿ, ಮೈಲಾರಗೌಡ ಹೊಸಮನಿ ಇತರು ಇದ್ದರು.