ಬೆಂಗಳೂರು: ‘ಉರ್ದು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದಂತಹ ಸೌಹಾರ್ದತೆಯುಳ್ಳ ದೇಶದಲ್ಲಿ ಉರ್ದು ಭಾಷೆಯನ್ನು ಅಳಿಸಿ ಹಾಕಲು ಸಾಧ್ಯವಿಲ್ಲ’ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಹೇಳಿದರು.
ಕರ್ನಾಟಕ ಉರ್ದು ಅಕಾಡೆಮಿ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಪ್ರಮೋಷನ್ ಆಫ್ ಉರ್ದು ಲಾಂಗ್ವೇಜ್ ಸಂಸ್ಥೆಯು ಶಿವಾಜಿನಗರದ ಬಿಬಿಎಂಪಿ ಮೈದಾನದಲ್ಲಿ ಆಯೋಜಿ ಸಿರುವ ‘15 ನೇ ಅಖಿಲ ಭಾರತ ಉರ್ದು ಪುಸ್ತಕ ಮೇಳ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಘೋಷಣೆ ಅಥವಾ ಮೆರವಣಿಗೆ ಗಳಿಂದ ಯಾವುದೇ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಮನೆ ಮನಗಳಲ್ಲಿ ಭಾಷೆಯ ಕುರಿತು ಪ್ರೀತಿ ಬೆಳೆಯಬೇಕು. ಆಗ ಯಾವುದೇ ಒಂದು ಭಾಷೆಯನ್ನು ಉಳಿಸಲು ಸಾಧ್ಯವಾಗುತ್ತದೆ. ಹಾಗೆಯೇ ಉರ್ದು ಭಾಷೆಯನ್ನು ಉಳಿಸಲು ಎಲ್ಲ ಮುಸ್ಲಿಂ ಬಾಂಧವರು ಪಣ ತೊಡಬೇಕು’ ಎಂದರು.
‘ಈಗ ತಂತ್ರಜ್ಞಾನ ಮುಂದುವರಿ ಯುತ್ತಿದೆ. ಅದರಂತೆ ಉರ್ದು ಭಾಷೆ ಯನ್ನು ಹೊಸ ತಂತ್ರಜ್ಞಾನಕ್ಕೆ ಅಳವಡಿ ಸುವ ಕಾರ್ಯವಾಗಬೇಕಾಗಿದೆ. ಈ ನಿಟ್ಟಿ ನಲ್ಲಿ ಸಂಶೋಧನೆಗಳಾಗಬೇಕು’ ಎಂದರು.
‘ಇಂದಿನ ಯುವ ಪೀಳಿಗೆಗೆ ಓದುವುದರಲ್ಲಿ ಆಸಕ್ತಿಯಿಲ್ಲ. ಅವರು ಕಂಪ್ಯೂಟರ್, ಇಂಟರ್ನೆಟ್ನ ಮೊರೆ ಹೋಗಿದ್ದಾರೆ. ಹೊಸ ತಂತ್ರಜ್ಞಾನದ ಜತೆಗೆ ಪುಸ್ತಕ ಓದುವ ಹವ್ಯಾಸವನ್ನು ಯುವಪೀಳಿಗೆ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ನ್ಯಾಷನಲ್ ಕೌನ್ಸಿಲ್ ಫಾರ್ ಪ್ರಮೋಷನ್ ಆಫ್ ಉರ್ದು ಲಾಂಗ್ವೇಜ್ ಸಂಸ್ಥೆಯ ನಿರ್ದೇಶಕ ಡಾ.ಖ್ವಾಜ ಇಕ್ರಾಮುದ್ದೀನ್ ಮಾತನಾಡಿ, ‘ಉರ್ದು ಭಾಷೆಯ ಉನ್ನತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕಳೆದ 2 ವರ್ಷಗಳಿಂದ ಬೆಂಗಳೂರಿನಲ್ಲಿ ಉರ್ದು ಪುಸ್ತಕ ಮೇಳವನ್ನು
ಆಯೋಜಿ ಸಲು ಪ್ರಯತ್ನ ನಡೆದಿತ್ತು. ಆದರೆ, ಹಿಂದಿನ ಸರ್ಕಾರ ಅದಕ್ಕೆ ಅವಕಾಶವನ್ನು ನೀಡಿರಲಿಲ್ಲ’ ಎಂದರು.
‘ದೇಶದ ಬೇರೆ ಬೇರೆ ನಗರಗಳಲ್ಲಿ ಉರ್ದು ಪುಸ್ತಕ ಮೇಳವು ನಡೆಯುತ್ತ ಬಂದಿದೆ. ದೆಹಲಿ, ಮುಂಬೈ, ಲಖನೌ, ಹೈದರಾಬಾದ್, ಶ್ರೀನಗರ ಇನ್ನೂ ಮುಂತಾದ ನಗರಗಳಲ್ಲಿ ನಡೆದಿದೆ. ಅದರಲ್ಲಿ ಮುಂಬೈನಲ್ಲಿ ನಡೆದ ಪುಸ್ತಕ ಮೇಳದಲ್ಲಿ ಅತಿ ಹೆಚ್ಚಿನ ಪುಸ್ತಕಗಳು ಮಾರಾಟವಾಗಿದ್ದವು’ ಎಂದು ಹೇಳಿದರು.
ರಾಜ್ಯ ಉರ್ದು ಅಕಾಡೆಮಿ ಸೇರಿದಂತೆ ಸುಮಾರು 75 ಉರ್ದು ಪ್ರಕಾಶಕರು ಈ ಮೇಳದಲ್ಲಿ ಭಾಗ
ವಹಿ ಸಿದ್ದಾರೆ. ರಿಯಾಯಿತಿ ದರದಲ್ಲಿ ಪುಸ್ತಕ ಗಳು ಮಾರಾಟಕ್ಕಿವೆ.
ಉರ್ದು ಎನ್ ಸೈಕ್ಲೋಪಿಡಿಯಾ, ಉರ್ದು ಸಾಹಿತ್ಯ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯ ಪುಸ್ತಕಗಳು ಕೂಡಾ ಮೇಳದಲ್ಲಿ ಲಭ್ಯವಿವೆ. ಉರ್ದು ಪುಸ್ತಕ ಮೇಳವು ಸೆ.22 ರವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.