ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲೆನಾಡಿನ ಸಂಸ್ಕೃತಿ ವಿಶಿಷ್ಟ, ವಿಭಿನ್ನ’

ಪ್ರತಿಭಾ ಸಂಗಮ ಮತ್ತು ಚಿತ್ರಕಲಾ ಪ್ರದರ್ಶನ ಸಮಾರೋಪ
Last Updated 8 ಡಿಸೆಂಬರ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲೆನಾಡಿನ ಸಂಸ್ಕೃತಿ­ಯು ವಿಭಿನ್ನ ಮತ್ತು ವಿಶಿಷ್ಟ­ವಾಗಿದೆ. ಆದರೋಪಚಾರ, ಸಂಶೋ­­­ಧನೆ­­­ಯಲ್ಲಿ, ಸಾಹಿತ್ಯ ಕೃಷಿಯಲ್ಲಿ ಮುಂದಿದೆ’ ಎಂದು ಶಾಸಕ ವೈ.ಎಸ್‌.ವಿ.ದತ್ತ ಹೇಳಿದರು.

ಮಲೆನಾಡ ಸೇನೆ ಬೆಂಗಳೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಸಂಗಮ ಮತ್ತು ಚಿತ್ರಕಲಾ ಪ್ರದರ್ಶನದ ಸಮಾರೋಪ ಸಮಾರಂಭ­­ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಲೆನಾಡಿನ ದಟ್ಟ ಹಸಿರು, ಕಾಡು, ಬೆಟ್ಟದಂತೆ ಅಲ್ಲಿನ ಜನರ ಮನಸ್ಸು ಕೂಡ ವಿಶಾಲವಾದುದು. ಅವರು ತಮ್ಮ ಸೌಜನ್ಯಯುತವಾದ ನಡವಳಿಕೆಯಿಂದ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ’ ಎಂದರು.

‘ನಾವು ಎಲ್ಲಿ ಹೋದರೂ ನಮ್ಮ ಊರಿನ ಬಗೆಗಿನ ಅಭಿಮಾನ ಮರೆ­ಯಾಗ­ಬಾರದು. ಕುವೆಂಪು ಅವರು ನಮ್ಮ ನಾಡು, ಸಂಸ್ಕೃತಿಯ ಬಗೆಗೆ, ಅದರಲ್ಲೂ ಮುಖ್ಯವಾಗಿ ಮಲೆನಾಡಿನ ಬಗೆಗೆ ಇಟ್ಟುಕೊಂಡಿದ್ದ ಉತ್ಕಟ ಅಭಿಮಾನ ಎಲ್ಲರಿಗೂ ಪ್ರೇರಣಾ­ದಾಯಕ­­ವಾಗಬೇಕು’ ಎಂದರು.

ಮಾಜಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ‘ಮಲೆನಾಡ ಸೇನೆಯು ಸಮಾಜಮುಖಿಯಾಗಿ ಪ್ರೇರಣೆ ನೀಡುವಂತಹ ಕಾರ್ಯವನ್ನು ಮಾಡಬೇಕು. ಸಂಯುಕ್ತ, ಸಂಘಟನೆಯಿಂದ ಬೆಳೆಯಬೇಕು’ ಎಂದು ಸಲಹೆ ನೀಡಿದರು.

‘ಮಲೆನಾಡಿನ ಜನರ ಬದುಕು ಅಡಿಕೆಯಲ್ಲಿದೆ. ಈ ವರ್ಷ ಮಾರುಕಟ್ಟೆ­ಯಲ್ಲಿ ಅಡಿಕೆಯ ಬೆಲೆ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದು ಮಲೆನಾಡಿನ ಜನರ ಈ ವರ್ಷದ ದುರಂತವಾಗಿದೆ. ರಾಜ್ಯ ಸರ್ಕಾರವು ಗುಟ್ಕಾ­ವನ್ನು ನಿಷೇಧಿಸಿದಾಗ ಗುಟ್ಕಾ ನಿಷೇಧ ಬೇಡ­ವೆಂದು ನಾವು ಹೋರಾಟ ನಡೆಸಬೇಕಾಗಿ ಬಂತು. ಏಕೆಂದರೆ, ಗುಟ್ಕಾದಲ್ಲಿ ಅಡಿಕೆಯಿದೆ. ಅಡಿಕೆಯಲ್ಲಿ ಮಲೆನಾಡಿನ ಜನರ ಜೀವನವಿದೆ’ ಎಂದು ಹೇಳಿದರು.

‘ಅಡಿಕೆಯಿದ್ದರೆ ಹೊಗೆಸೊಪ್ಪು, ಗುಟ್ಕಾ ಬಳಕೆಗೆ ಬರುತ್ತದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆಯನ್ನು ನಿಷೇಧಿಸಬೇಕು ಎಂದು ವಾದ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರವು ಅಲ್ಲಿ ರೈತರ ಪರ ಮಾತನಾಡುವ ವಕೀಲರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದು ಇಂದಿನ ಅಡಿಕೆ ಬೆಳೆಗಾರರ ಕಥೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT