ಹುಬ್ಬಳ್ಳಿ: ‘ರಾಜ್ಯದಾದ್ಯಂತ ಇದೇ 10ರಂದು ತೆರೆ ಕಾಣಲಿರುವ ‘ಮಹಾಶರಣ ಹರಳಯ್ಯ’ ಸಿನಿಮಾವನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಪ್ರಚಾರ ನೀಡುವ ಉದ್ದೇಶದಿಂದ ನಗರದಲ್ಲಿ ಬೈಕ್ ರ್್ಯಾಲಿ, ಮೆರವಣಿಗೆ, ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಗುರುನಾಥ ಉಳ್ಳಿಕಾಶಿ ತಿಳಿಸಿದರು.
‘ದಲಿತ ಸಮಾಜದಲ್ಲಿ ಅತಿ ಹಿಂದುಳಿದ ಸಮಗಾರ ಹರಳಯ್ಯ ಸಮಾಜದ 12ನೇ ಶತಮಾನದ ಕ್ರಾಂತಿಕಾರಿ ವಿಷಯ, ಶೋಷಿತ ಶರಣರಾದ ಮಹಾಶರಣ ಹರಳಯ್ಯನವ ಜೀವನ ಕಥೆಯನ್ನೊಳಗೊಂಡ ಈ ಸಿನಿಮಾಕ್ಕೆ ಮಹಾ ಮಂಡಳ ಸಂಪೂರ್ಣ ಬೆಂಬಲ ನೀಡುತ್ತದೆ. ಸಿನಿಮಾ ಬಿಡುಗಡೆಯ ದಿನ ಹೆಗ್ಗೇರಿಯ ಶ್ರೀ ಭುವನೇಶ್ವರಿ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಇಂಡಿ ಪಂಪ್, ಹಳೇಹುಬ್ಬಳ್ಳಿ, ಹಿರೇಪೇಟೆ, ಜವಳಿಸಾಲ, ದುರ್ಗದಬೈಲ್, ಸ್ಟೇಷನ್ ರಸ್ತೆ, ಮರಾಠಗಲ್ಲಿ ಮೂಲಕ ಚನ್ನಮ್ಮ ವೃತ್ತದವರೆಗೆ ಬೈಕ್ ರ್್ಯಾಲಿ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಬೆಳಿಗ್ಗೆ ಲಿಡಕರ್ ಕಾಲೊನಿಯಿಂದ ಸಿನಿಮಾ ಬಿಡುಗಡೆಯಾಗುವ ರೂಪಂ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಇದೇ 12ರಂದು ಚಿತ್ರತಂಡ ರೂಪಂ ಚಿತ್ರಮಂದಿರಕ್ಕೆ ಬರಲಿದೆ. ಈ ವೇಳೆ ಮಹಾಮಂಡಳದ ವತಿಯಿಂದ ತಂಡವನ್ನು ಸನ್ಮಾನಿಸಲಾಗುವುದು. ಸಮಗಾರ ಹರಳಯ್ಯ ಸಮಾಜ ಪ್ರಮುಖ ಶೋಷಿತ ಸಮಾಜವಾಗಿದ್ದು, ಕಮರ್ಷಿಯಲ್ ಸಿನಿಮಾಗಳ ಸಂದರ್ಭದಲ್ಲಿ ಪೌರಾಣಿಕ ಚಿತ್ರ ನಿರ್ಮಿಸಿರುವುದು ಸಾಹಸದ ಕೆಲಸ. ಅದರಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಶ್ರೀಧರ, ರಮೇಶ ಅರವಿಂದ ಮತ್ತು ಚಿತ್ರತಂಡದ ಸಾಧನೆ ಶ್ಲಾಘನೀಯ. ಮಹಾನಗರದ ಜನರು ಈ ಸಿನಿಮಾವನ್ನು ವೀಕ್ಷಿಸಿ ಸಮಾನತೆ ಮೆರೆಯಬೇಕು’ ಎಂದರು.
ಮಹಾಮಂಡಲದ ಅಧ್ಯಕ್ಷ ಪರಶುರಾಮ ಅರಕೇರಿ, ಪ್ರಭು ಅಣ್ಣಿಗೇರಿ, ಸದಾನಂದ ತೆರದಾಳ ಇದ್ದರು.