ಬೆಂಗಳೂರು: ‘ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜುವರೆಗೆ ಕರಾಟೆ, ಮಾರ್ಷಲ್ ಆರ್ಟ್ನಂತಹ ರಕ್ಷಣಾ ಕಲೆಗಳನ್ನು ಕಲಿಸಬೇಕಾದ ಅಗತ್ಯವಿದೆ’ ಎಂದು ಲೋಕಸತ್ತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಡಾ.ಮೀನಾಕ್ಷಿ ಆರ್.ಭರತ್ ಹೇಳಿದರು. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ – ಸುರಕ್ಷತೆ’ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ನಡೆದ ನಂತರ ಅವುಗಳಿಗೆ ಪರಿಹಾರ ಹುಡುಕುವ ಬದಲು ಹೆಣ್ಣು ಮಕ್ಕಳಲ್ಲಿ ಅಂತಹ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಮೈನೋಸ್ಥೈರ್ಯ ತುಂಬಬೇಕಾದ ಅಗತ್ಯವಿದೆ. ಅದು ಕರಾಟೆ, ಮಾರ್ಷಲ್ ಆರ್ಟ್ನಂತಹ ಕಲೆಗಳಿಂದ ಸಾಧ್ಯ ಎಂದರು.
ವಕೀಲೆ ಜ್ಯೋತಿ ಭಟ್ ಮಾತನಾಡಿ, ಮಹಿಳೆಯರು ಪ್ರಚೋದನಕಾರಿಯಾದಂತಹ ಬಟ್ಟೆ ಧರಿಸುವುದು ಅತ್ಯಾಚಾರಕ್ಕೆ ಕಾರಣ ಎಂಬುದು ಕೆಲವರ ವಾದವಾಗಿದೆ. ಆದರೆ, ಇದು ಕೇವಲ ವಸ್ತ್ರದ ಸಮಸ್ಯೆಯಲ್ಲ. ಅಂತಹವರ ಮನಸ್ಥಿತಿ ಮತ್ತು ಬೆಳೆದು ಬಂದ ಪರಿಸರ ಅದಕ್ಕೆ ಕಾರಣವಾಗಿರುತ್ತದೆ.