ಶೃಂಗೇರಿ: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಿದಾಗ ಮಕ್ಕಳ ಸೃಜನಾತ್ಮಕತೆಗೆ ಮೂರ್ತರೂಪ ದೊರಕುವುದರಿಂದ, ಈ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವ ಕುರಿತು ಸರ್ಕಾರ ಚಿಂತಸಬೇಕು ಎಂದು ಕವಿ ಪ್ರೊ.ನಿಸಾರ್ ಅಹಮದ್ ಹೇಳಿದರು.
ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ ಶನಿವಾರ ಸ್ವರ ಸನ್ನಿಧಿ ಪ್ರತಿಷ್ಠಾನ ಹಾಗೂ ಶೃಂಗಾದ್ರಿ ಕಲ್ಚರಲ್ ಟ್ರಸ್ಟ್ ಆಯೋಜಿಸಿದ್ದ ನಿಸಾರ್ರ ಗಿತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಭಾವನೆ ಹಾಗೂ ಸಂವೇದನಾತ್ಮಕ ತುಡಿತವಿದೆ. ಪ್ರಾದೇಶಿಕ ಭಾಷೆ ಬಳಕೆಯಿಂದ ಸುಲಭವಾಗಿ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಸಂಸ್ಕಾರಗಳು ದೊರಕಬೇಕಾದರೆ ಮಾತೃಭಾಷೆಯನ್ನು ನಿರಂತರವಾಗಿ ಪ್ರೀತಿಸಬೇಕು. ಕೃತಕ ಕನ್ನಡತನ ಬೆಳೆಸಿಕೊಂಡು ಜನತೆಯನ್ನು ವಂಚಿಸುವ ಪ್ರವೃತ್ತಿ ಕೈಬಿಟ್ಟು, ಅಚ್ಚ ಕನ್ನಡದಲ್ಲಿ ಸಹಜತೆ ಮರೆಯಬೇಕು ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ಮಾತನಾಡಿ, ‘ಬದಲಾದ ಕಾಲಘಟ್ಟದಲ್ಲಿ ಪೂರ್ವಿಕರ ಬಳುವಳಿಯಾದ ಅಮೂಲ್ಯ ಕನ್ನಡವನ್ನು ಜತನದಿಂದ ಕಾಪಾಡುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು’ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಬಹುಮಾನ ವಿತರಿಸಿದರು.
ನುಡಿ ಚಿತ್ರಕಾರ ಶಂ.ನ.ಶೇಷಗಿರಿ ಅವರನ್ನು ಗೌರವಿಸಲಾಯಿತು. ಶೃಂಗಾದ್ರಿ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಂ.ನಾರಾಯಣ, ಡಾ.ಶಮಿತಾ ಮಲ್ನಾಡ್, ಹೊಸ್ಕೆರೆ ನಟೇಶ್, ಹೆಗ್ಗದ್ದೆ ಶಿವಾನಂದರಾವ್ ಇದ್ದರು. ವೇದಿಕೆ ಕಾರ್ಯಕ್ರಮ ನಂತರ ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಆನಂದ ಮಾದಲಗೆರೆ, ಕಣದಮನೆ ಜಗದೀಶ್, ಸಂತೋಷ್, ಹೃಷಿಕೇಶ್, ಅದ್ವೈತ್ ಹೆಗ್ಡೆ ಅವರಿಂದ ನಿಸಾರ್ರ ಗೀತಗಾಯನ ನಡೆಯಿತು.