ಬೆಳಗಾವಿ: ‘ವ್ಯಕ್ತಿ- ವ್ಯಕ್ತಿಗಳ ಸಂಬಂಧಗಳನ್ನು ಪರಸ್ಪರರನ್ನು ಗೌರವಿಸಬೇಕು. ಅದನ್ನು ಅಲಕ್ಷಿಸಿದರೂ ಮಾನವ ಹಕ್ಕುಗಳ ಮೇಲೆ ಮಾಡುವ ದುರಾಕ್ರಮಣವಾಗುತ್ತದೆ. ಈ ದಿಸೆಯಲ್ಲಿ ಹೆಚ್ಚಾಗಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ಪದೇ ಪದೇ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ವರದಿಯಾಗುತ್ತಿರುವುದು ವಿಷಾದನೀಯ’ ಎಂದು ಜಿಲ್ಲಾ ನ್ಯಾಯಾಧೀಶ ಪಿ.ಕೃಷ್ಣ ಭಟ್ ಹೇಳಿದರು.
ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾನೂನುಗಳ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅದು ಸಾರ್ವತ್ರಿಕ ಮತ್ತು ಸಮಾನವಾಗಿರಬೇಕಾದ್ದು ಅವಶ್ಯವಾಗಿದೆ ಎಂದ ಅವರು, ಅಧಿಕಾರ ಮಟ್ಟದಲ್ಲಿ ಕರ್ತವ್ಯದ ಬಗ್ಗೆ ಗಾಂಭೀರ್ಯದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದರು.
ಆಡಳಿತದಲ್ಲಿ ಭ್ರಷ್ಟಾಚಾರದ ಅತಿಕ್ರಮಣ ಹೆಚ್ಚಾಗುತ್ತಿರುವದು ತಿಳಿದ ಸಂಗತಿಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಗೆ ಇದು ಮೂಲ ಕಾರಣವಾಗಿದೆ. ಮಾನವ ಹಕ್ಕುಗಳನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರು ರೂಢಿಸಿಕೊಂಡಾಗ ಮಾತ್ರ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸುತ್ತಿರುವದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ಮಾತನಾಡಿ, ಹೆಚ್ಚಾಗಿ ಮಾನವರಲ್ಲಿ ಸ್ವಾರ್ಥ, ಆಸೆ, ಮೌಢ್ಯತೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. 12ನೇ ಶತಮಾನದಲ್ಲಿ ಮಾನವ ಹಕ್ಕುಗಳ ಕುರಿತು ಕಲ್ಪನೆ ಇತ್ತು. ವಚನ, ದಿವ್ಯ ಸಂದೇಶ ಹಾಗೂ ಪುರಾಣಗಳಲ್ಲಿ ಈ ಕುರಿತು ಉಲ್ಲೇಖವಿರುವದು ಕಂಡು ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಜಯರಾಂ, 850 ವರ್ಷಗಳ ಹಿಂದೆ ಮಾನವ ಹಕ್ಕು ಕುರಿತು ಪರಿಕಲ್ಪನೆ ಇತ್ತು. ಆ ಕುರಿತು ಶಾಸನಗಳಲ್ಲಿ ಉಲ್ಲೇಖಗಳಿವೆ. ಆ ಕಾಲದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿರುವದನ್ನು ಗಮನಿಸಬಹುದಾಗಿದೆ. ಮಾನವನು ಘನತೆ ಹಾಗೂ ಗೌರವದಿಂದ ಬಾಳಲು ಭೌತಿಕ ಸಂಪತ್ತು ಸರಿ ಸಮಾನ ಹಂಚಿಕೆಯಾಗಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೋಳನ್ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಸ್ವಾಗತಿಸಿದರು. ವಿದ್ಯಾ ಭಜಂತ್ರಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.