ಬ್ರಹ್ಮಾವರ: ಹಿರಿಯರ ಮಾರ್ಗದರ್ಶನ, ಸಲಹೆ ಸೂಚನೆಗಳಿಂದ ಸಂಘಟನೆ ಬೆಳೆಯಲು ಸಾಧ್ಯ ಎಂದು ಕೀರ್ತಿನಗರದ ರಾಘವೇಂದ್ರ ಭಜನಾ ಮಂದಿರದ ಆಡಳಿತ ಮೊಕ್ತೇಸರ ಕುಮಾರ್ ಶೆಟ್ಟಿ ಹೇಳಿದರು.
ಕುಂಜಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೂರು ಕೀರ್ತಿನಗರದಲ್ಲಿ ಶನಿವಾರ ಅವರು ಸ್ಪಂದನ ಯುವ ವೃಂದವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗುವ ಯುವ ಸಂಘಟನೆಗಳು ಅಲ್ಲಿಯ ಪ್ರತಿಭೆಗಳನ್ನು ಹೊರತರುವ ಪ್ರಯತ್ನವನ್ನೂ ಮಾಡುತ್ತಿರುವುದು ಶ್ಲಾಘನೀಯ. ಯುವಸಂಘಟನೆಗಳು ಮನೋರಂಜನೆಗೆ ಸೀಮಿತವಾಗಿರದೆ ಸಮಾಜಸೇವೆಯಲ್ಲೂ ಸಕ್ರಿಯವಾಗಿರಬೇಕು ಎಂದು ಅವರು ಸಲಹೆ ನೀಡಿದರು.
ಕುಂಜಾಲು ಗ್ರಾ.ಪಂ ಮಾಜಿ ಉಪಾಧ್ಯಕ್ಷ ರಾಜೀವ ಕುಲಾಲ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯೆ ಗೋಪಿ ಕೆ. ನಾಯ್ಕ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಜ್ಯೋತಿ ನಾಯ್ಕ, ಕುಂಜಾಲು ಗ್ರಾ.ಪಂ ಮಾಜಿ ಅಧ್ಯಕ್ಷ ರಘುರಾಮ್ ಶೆಟ್ಟಿ, ಯುವ ವೃಂದದ ನೂತನ ಅಧ್ಯಕ್ಷ ಚಂದ್ರಶೇಖರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶತಾಯುಷಿ ಕುರ್ಡುಂಜೆ ಕೊರಗಯ್ಯ ಶೆಟ್ಟಿ ದಂಪತಿ, ನಾಟಿ ವೈದ್ಯ ಬಾಬು ನಾಯ್ಕ ಮತ್ತು ತಂದೂರಿ ಬಟ್ಟಿ ತಯಾರಕ ಮಂಜು ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಯುವ ವೃಂದದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀಕಾಂತ್ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.