ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಜಿನ ಔತಣ ಬೇಡ, ಹಸಿದವರಿಗೆ ಊಟ ಕೊಡಿ’

ಕ್ರಿಸ್‌ಮಸ್‌ ಸಂಭ್ರಮ: ಆರ್ಚ್‌ ಬಿಷಪ್‌ ಅವರಿಂದ ಹೊಸವರ್ಷದ ಸಂದೇಶ
Last Updated 20 ಡಿಸೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ದುಂದುವೆಚ್ಚ, ಮೋಜಿನ ಔತಣಗಳಿಗೆ ಸಂಪೂರ್ಣ ಕಡಿವಾಣ ಹಾಕ­ಬೇಕು. ಹಸಿದವರಿಗೆ ಆಹಾರ, ಬಾಯಾರಿದವರಿಗೆ ನೀರು ಕೊಟ್ಟು ಹರಸಬೇಕು. ಕ್ಯಾನ್ಸರ್‌, ಏಡ್ಸ್‌ ರೋಗಿಗಳತ್ತ ನಮ್ಮ ಕಣ್ಣುಗಳು ಸದಾ ನೋಡುವಂತಾಗಬೇಕು’

–ನಗರದ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌ ಶುಕ್ರವಾರ ನೀಡಿದ ಕ್ರಿಸ್‌ಮಸ್‌ ಸಂದೇಶ ಇದು. ಕ್ರಿಸ್‌ಮಸ್‌ ಸಹಮಿಲನ ಕಾರ್ಯಕ್ರ­ಮದಲ್ಲಿ ಅವರು ಈ ಸಂದೇಶವನ್ನು ನೀಡಿದರು.

‘ಸಮಾಜದಲ್ಲಿ ಅಶಾಂತಿಯನ್ನು ಕಡಿಮೆ ಮಾಡಲು ತಾರತಮ್ಯ, ಭ್ರಷ್ಟಾ­ಚಾರ, ಶೋಷಣೆಯಂತಹ ಬೃಹತ್‌ ಗೋಡೆಗಳನ್ನು ಕೆಡವಿ ಹಾಕಬೇಕಿದೆ. ಅದಕ್ಕಾಗಿ ಎಲ್ಲರೂ ಒಂದುಗೂಡ­ಬೇಕಿದೆ. ಸರಳ ಜೀವನ ನಡೆಸುವ ಮೂಲಕ ದೀನ–ದಲಿತರು ಹಾಗೂ ನಿರ್ಗತಿಕರ ಮೇಲೆ ಒಲವು ತೋರ­ಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ಪಡೆಯುವುದಕ್ಕಿಂತ ಕೊಡುವುದೇ ಹೆಚ್ಚು ಧನ್ಯವಾದುದು ಎನ್ನುತ್ತದೆ ಪವಿತ್ರ ಬೈಬಲ್‌. ನನ್ನ ಸಂದೇಶ­ವಾದರೂ ಇದೇ ಆಗಿದೆ. ಉಳ್ಳವರು ಇಲ್ಲದವರ ಮೇಲೆ ಕಾಳಜಿ– ಪ್ರೀತಿ ತೋರಬೇಕು’ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂ­ಡಿದ್ದ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌, ‘ಜಗತ್ತಿನ ಎಲ್ಲ ಧರ್ಮ­ಗಳ ತಿರುಳೂ ಒಂದೇ ಆಗಿದೆ. ಅದೇ ಸಹಬಾಳ್ವೆ ಮತ್ತು ಶಾಂತಿ’ ಎಂದರು. ‘ಜಗತ್ತಿನ ಎಲ್ಲ ಧರ್ಮಗಳಿಗೆ ನೆಲೆ ನೀಡಿದ ಭಾರತದಂತಹ ದೇಶ ಮತ್ತೊಂದಿಲ್ಲ’ ಎಂದು ಅಭಿಮಾನ­ದಿಂದ ಹೇಳಿದರು.

‘ಕ್ರಿಶ್ಚಿಯನ್ನರು ಮತ್ತು ಅವರ ಮಿಷ­ನರಿ­ಗಳಷ್ಟು ಸಮಾಜ ಸೇವೆ ಮಾಡುವ ಸಂಸ್ಥೆಗಳನ್ನು ನಾನು ಬೇರೆ ಕಂಡಿಲ್ಲ. ಯಾರೇ ಅಸಹಾಯಕ ಸ್ಥಿತಿಯಲ್ಲಿದ್ದರೂ ಮೊದಲ ಸಹಾಯಹಸ್ತ ಸಿಗುವುದು ಕ್ರಿಶ್ಚಿಯನ್ನರಿಂದ’ ಎಂದು ತಿಳಿಸಿದರು.

ಗೃಹ ಸಚಿವ ಕೆ.ಜೆ. ಜಾರ್ಜ್‌, ಶಾಸಕ­ರಾದ ರೋಷನ್‌ ಬೇಗ್‌, ಎನ್‌.ಎ.­ಹ್ಯಾರೀಸ್‌ ಮತ್ತು ಮಾಜಿ ಸಂಸದ ಎಚ್‌.ಟಿ. ಸಾಂಗ್ಲಿಯಾನ ಹಾಜರಿದ್ದರು.

ಶಾಲಾ ಮಕ್ಕಳು ಬಾಲ ಯೇಸು ರೂಪಕವನ್ನು ಪ್ರಸ್ತುತಪಡಿಸಿದರು. ಕೆರೋಲ್‌ ಗೀತೆಗಳು ಮನಸೂರೆ­ಗೊಂಡವು. ಆರ್ಚ್‌ ಬಿಷಪ್‌ ಅವರು ರಾಜ್ಯಪಾಲರ ಜತೆಗೂಡಿ ಬಾಲ ಯೇಸುವನ್ನು ಗುಡಿಸಲಿನ ಒಳಗಿದ್ದ ತೊಟ್ಟಿಲಿನಲ್ಲಿ ಪವಡಿಸುವಂತೆ ಮಾಡಿ­ದರು.

‘ವ್ಯಾಕುಲ ದೂರವಾಗಿದೆ’
ಬೆಂಗಳೂರು: ‘ಹಿಂದೆ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆದಾಗ ಆರ್ಚ್‌ ಬಿಷಪ್‌ ಮತ್ತು ನಾನು ತುಂಬಾ ವ್ಯಾಕುಲಕ್ಕೆ ಒಳಗಾಗಿದ್ದೆವು. ಚಿಂತೆ ಬೇಡ, ಒಳ್ಳೆಯ ದಿನಗಳು ಬರುತ್ತವೆ ಎನ್ನುವ ಭರವಸೆಯನ್ನು ಬಿಷಪ್‌ ಅವರಿಗೆ ನೀಡಿದ್ದೆ. ಅಂತಹ ದಿನಗಳು ಈಗ ಬಂದಿವೆ. ಕ್ರಿಶ್ಚಿಯನ್‌ ಸಮು­ದಾಯಕ್ಕೇ ಸೇರಿದ ಕೆ.ಜೆ. ಜಾರ್ಜ್‌ ರಾಜ್ಯದ ಗೃಹ ಮಂತ್ರಿಯಾಗಿದ್ದಾರೆ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT